ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾಯಿತು ಭಿನ್ನ ದೃಷ್ಟಿಕೋನದ ಧ್ವನಿ

Last Updated 25 ಆಗಸ್ಟ್ 2019, 11:24 IST
ಅಕ್ಷರ ಗಾತ್ರ

ನನ್ನ ದೀರ್ಘಕಾಲದ ಗೆಳೆಯ ಅರುಣ್‌ ಜೆಟ್ಲಿ ಅವರನ್ನು ಭೇಟಿಯಾಗಲು ಆ.11ರಂದು ದೆಹಲಿಯ ಆಸ್ಪತ್ರೆಗೆ ಹೋಗಿದ್ದೆ. ಅವರು ಬೇಗನೆ ಗುಣಮುಖರಾಗಬಹುದೆಂಬ ಆಶಾಭಾವನೆ ನನ್ನಲ್ಲಿತ್ತು. ತನ್ನ ಕೈಯನ್ನು ನನ್ನ ಕೈಯಲ್ಲಿಟ್ಟ ಜೇಟ್ಲಿ, ‘ಎಲ್ಲವೂ ಒಳ್ಳೆಯದಾಗುತ್ತದೆ’ ಎಂದು ಸಂಜ್ಞೆಗಳಿಂದಲೇ ಮಾತನಾಡಿದ್ದರು. ಅದೇ ಜೇಟ್ಲಿ ಜೊತೆಗಿನ ನನ್ನ ಕೊನೆಯ ಹಸ್ತಲಾಘವ ಆಗಿರುತ್ತದೆ ಎಂದು ನಾನು ಭಾವಿಸಿರಲಿಲ್ಲ. ಅವರು ಇನ್ನು ನಮ್ಮೊಂದಿಗೆ ಇರುವುದಿಲ್ಲ, ಅವರ ಮಾರ್ಗದರ್ಶನ ನನಗೆ ಸಿಗುವುದಿಲ್ಲ ಎಂಬುದನ್ನು ನಂಬಲೂ ಆಗುತ್ತಿಲ್ಲ.

ಸುಮಾರು 40 ವರ್ಷಗಳ ಹಿಂದೆ, 1974ರಲ್ಲಿ ನಡೆದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರುಗಳ ಸಭೆಯಲ್ಲಿ ನಾವು ಮೊದಲಬಾರಿ ಭೇಟಿಯಾಗಿದ್ದೆವು. ಜೇಟ್ಲಿ ದೆಹಲಿ ವಿಶ್ವವಿದ್ಯಾಲಯವನ್ನು ಮತ್ತು ನಾನು ಆಂಧ್ರ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದೆವು. ಅಲ್ಲಿಂದ ಇಲ್ಲಿಯವರೆಗೂ ಏಳು–ಬೀಳುಗಳ ರಾಜಕೀಯ ಜೀವನದಲ್ಲಿ ನಾವು ಸಹಪ್ರಯಾಣಿಕರಾದೆವು. ಈ ಅವಧಿಯಲ್ಲಿ ಪರಸ್ಪರರ ಮೇಲಿನ ಗೌರವ, ಅವಲಂಬನೆಗಳು ಗಾಢವಾದವು. ಇಂಥ ಆತ್ಮೀಯ ಸ್ನೇಹಿತನನ್ನು ಅಕಾಲದಲ್ಲಿ ಕಳೆದುಕೊಂಡಿರುವುದರಿಂದ ಛಿದ್ರಗೊಂಡಿದ್ದೇನೆ.

ಜೇಟ್ಲಿಯದ್ದು ಬಹುಮುಖ ಪ್ರತಿಭೆ. ಸಮಕಾಲೀನ ಭಾರತದ ಅತ್ಯಂತ ಪ್ರಭಾವಿ ಮತ್ತು ವ್ಯಾಪಕವಾಗಿ ಒಪ್ಪಿತವಾದ ರಾಜಕೀಯ ಧ್ವನಿಯಾಗಿ ಅವರು ಹೊರಹೊಮ್ಮಿದರು. ಚಿಂತನೆಗಳಲ್ಲಿ ಅವರಿಗಿದ್ದ ಸ್ಪಷ್ಟತೆ, ವಿಚಾರಗಳನ್ನು ಮಂಡಿಸುವಲ್ಲಿ ಇದ್ದ ಪರಿಣತಿ, ಪರಿಣಾಮಕಾರಿ ಸಂವಹನ ಕಲೆ ಅವರನ್ನು ಈ ಮಟ್ಟಕ್ಕೆ ಏರಿಸಿದವು. ಈ ಕಾರಣಗಳಿಂದ ಅವರು ಪಕ್ಷದ ಮತ್ತು ಬಿಜೆಪಿ ನೇತೃತ್ವದ ಸರ್ಕಾರದ ಅತ್ಯಂತ ಪರಿಣಾಮಕಾರಿ ವಕ್ತಾರ ಎನಿಸಿಕೊಂಡರು. ಅವರ ನಿಧನದಿಂದ ದೇಶವು ಒಂದು ಭಿನ್ನ ದೃಷ್ಟಿಕೋನದ ಧ್ವನಿಯನ್ನು ಕಳೆದುಕೊಂಡಂತಾಗಿದೆ.

ಕಾನೂನಿನ ವ್ಯಾಪಕ ಅಧ್ಯಯನ ಹಾಗೂ ಸ್ಪಷ್ಟತೆಯು ಎಲ್ಲಾ ಚರ್ಚೆಗಳಲ್ಲಿ ಗೆಲ್ಲುವ ಸಾಮರ್ಥ್ಯವನ್ನು ಜೇಟ್ಲಿ ಅವರಿಗೆ ತಂದುಕೊಟ್ಟವು. ಅವರು ಪ್ರತಿಪಾದಿಸುವ ವಿಚಾರಗಳನ್ನು ರಾಜಕೀಯ ವಿರೋಧಿಗಳು ಒಪ್ಪದಿರಬಹುದು, ಆದರೆ ಅವರ ದೃಷ್ಟಿಕೋನ ಮತ್ತು ಅದನ್ನು ಪ್ರತಿಪಾದಿಸುವ ರೀತಿಯನ್ನು ಶ್ಲಾಘಿಸದೆ ಇರಲಾರರು.

1974ರಲ್ಲಿ ದೆಹಲಿ ವಿ.ವಿ.ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದ ಜೇಟ್ಲಿ ಅವರು ತುರ್ತು ಪರಿಸ್ಥಿತಿಯ ನಂತರ ರಚನೆಯಾದ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಅತ್ಯಂತ ಕಿರಿಯ ವಯಸ್ಸಿನ ಸದಸ್ಯರಾಗಿದ್ದರು. ದೇಶದ ರಾಜಕೀಯ ಸುಂಟರಗಾಳಿಯಲ್ಲೂ ಅವರು ದೃಢವಾಗಿ ಮೇಲೇರುತ್ತಾ ಬಂದರು. ತಾನು ನಿರ್ವಹಿಸಿದ್ದ ಎಲ್ಲಾ ಸಚಿವಾಲಯಗಳಲ್ಲೂ ಜೇಟ್ಲಿ ಅವರು ಛಾಪು ಮೂಡಿಸಿ ಹೋಗಿದ್ದಾರೆ. ಜಿಎಸ್‌ಟಿ, ದಿವಾಳಿ ಕಾಯ್ದೆ ಮುಂತಾಗಿ ಆರ್ಥಿಕತೆಗೆ ಹೊಸ ದಿಕ್ಕು ನೀಡಬಲ್ಲಂಥ ಅನೇಕ ಕಾಯ್ದೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅತ್ಯಂತ ಸಂಕೀರ್ಣ ಸ್ಥಿತಿಯಲ್ಲಿ ದೇಶದ ಹಣಕಾಸು ಸಚಿವರಾಗಿ ಅವರು ದೇಶದ ರಾಜಕೀಯ ಅರ್ಥವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು

2009ರಲ್ಲಿ ರಾಜ್ಯಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿ ನೇಮಕಗೊಂಡ ಅವರು ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಾನು ಸಭಾಪತಿಯಾದ ನಂತರ ಅವರು ನನಗೆ ಬೆಂಬಲವಾಗಿ ನಿಂತಿದ್ದರು. ಯಾವಾಗ ಕಠಿಣ ತೀರ್ಮಾನಗಳನ್ನು ಕೈಗೊಳ್ಳಬೇಕು ಮತ್ತು ಯಾವಾಗ ವಿರೋಧಪಕ್ಷದವರಿಗೂ ಅವಕಾಶ ನೀಡಬೇಕು ಎಂಬ ಬಗ್ಗೆ ಸ್ಪಷ್ಟವಾದ ಜ್ಞಾನ ಹೊಂದಿದ್ದ ಅಪರೂಪದ ವ್ಯಕ್ತಿಯಾಗಿದ್ದರು ಜೇಟ್ಲಿ. ಸಂವಿಧಾನದ ಮೇಲೆ ಅಚಲ ವಿಶ್ವಾಸವಿಟ್ಟು, ಅದರಲ್ಲಿ ನಮೂದಿತವಾಗಿರುವ ಎಲ್ಲಾ ಹಕ್ಕುಗಳು ಪ್ರತಿಯೊಬ್ಬ ನಾಗರಿಕನಿಗೂ ಲಭಿಸಬೇಕು ಎಂದು ನಂಬಿದ್ದರು. ತುರ್ತು ಪರಿಸ್ಥಿತಿಯನ್ನು ವಿರೋಧಿಸುವ ಸಲುವಾಗಿ 1977ರಲ್ಲಿ ರಚನೆಯಾಗಿದ್ದ ‘ಲೋಕತಾಂತ್ರಿಕ ಯುವ ಮೋರ್ಚಾದ’ ಸಂಚಾಲಕರಾಗಿದ್ದ ಅವರು, ನನ್ನಂತೆಯೇ 19 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದರು. ತನ್ನ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡು ಭಾರತವು ಅತ್ಯುನ್ನತ ಮಟ್ಟಕ್ಕೆ ಏರಬೇಕು ಎಂದು ಬಯಸಿದ್ದ ರಾಷ್ಟ್ರವಾದಿಯಾಗಿದ್ದರು.

ಆರಂಭದಿಂದಲೇ ಜೇಟ್ಲಿ ಭ್ರಷ್ಟಾಚಾರದ ಕಡು ವಿರೋಧಿ. 1973ರಲ್ಲಿ ಜಯಪ್ರಕಾಶ ನಾರಾಯಣ ಅವರು ಆರಂಭಿಸಿದ್ದ ಭ್ರಷ್ಟಾಚಾರ ವಿರೋಧಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಜನ ಲೋಕಪಾಲ ಸ್ಥಾಪನೆಗಾಗಿ ಅಣ್ಣಾ ಹಜಾರೆ ಆರಂಭಿಸಿದ್ದ ಹೋರಾಟಕ್ಕೂ ಅವರು ಬೆಂಬಲ ಸೂಚಿಸಿದ್ದರು.

ಅವರೊಬ್ಬ ಅತ್ಯುತ್ತಮ ಸಂಸದ, ನಿರರ್ಗಳ ವಾಗ್ಮಿ. 2014–19ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವರು ಸಂಸತ್ತಿನ ಒಳಗೆ ಹಾಗೂ ಹೊರಗೆ ಬಿಜೆಪಿಯ ನಿಲುವುಗಳನ್ನು ಸಮರ್ಥವಾಗಿ ಪ್ರತಿಪಾದಿಸಿದ್ದರು. ಪಕ್ಷದ ಮತ್ತು ಸರ್ಕಾರದ ಮೂಲ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಮಾಡದೆಯೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರಗಳನ್ನು ಕಂಡುಕೊಳ್ಳುವ ಅಪರೂಪದ ಜಾಣ್ಮೆಯನ್ನು ಜೇಟ್ಲಿ ಹೊಂದಿದ್ದರು.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರಗಳ ಬಗ್ಗೆ ಅವರಿಗೆ ಇದ್ದ ಅಪಾರವಾದ ಜ್ಞಾನವೇ ಅವರನ್ನು ಇತರರಿಂದ ಭಿನ್ನವಾಗಿಸಿತ್ತು. ಸಮಕಾಲೀನ ವಿಚಾರಗಳ ಮೂಲ, ಅದರ ಸಮಾಜಿಕ– ಆರ್ಥಿಕ, ಭೌಗೋಳಿಕ ಮತ್ತು ರಾಜಕೀಯ ಪರಿಣಾಮಗಳು ಮತ್ತು ಅವುಗಳಿಗೆ ಇರುವ ಪರಿಹಾರಗಳ ಬಗ್ಗೆ ತಿಳಿದುಕೊಳ್ಳಲು ಅವರು ಅಪಾರ ಶ್ರಮ ವಹಿಸುತ್ತಿದ್ದರು. ಆ ವಿಚಾರಗಳನ್ನು ಮಂಡಿಸುವಲ್ಲಿಅವರಿಗೆ ಇದ್ದ ಆಳವಾದ ಬೌದ್ಧಿಕ ಮತ್ತು ವಿಶ್ಲೇಷಣಾ ಸಾಮರ್ಥ್ಯವು ಅವರನ್ನು ಕಡೆಗಣಿಸಲಾಗದ ಧ್ವನಿಯನ್ನಾಗಿಸಿತ್ತು. ಆ ಧ್ವನಿ ಇನ್ನು ನಮ್ಮ ಜೊತೆಗಿಲ್ಲ.

ಆಗಸ್ಟ್‌ ತಿಂಗಳು ಅತ್ಯಂತ ವೇತನಾದಾಯಕವಾಗಿ ಪರಿಣಮಿಸಿದೆ. ಸಣ್ಣ ಅವಧಿಯಲ್ಲೇ ಅರುಣ್‌ ಜೇಟ್ಲಿ, ಸುಷ್ಮಾ ಸ್ವರಾಜ್‌ ಹಾಗೂ ಜೈಪಾಲ್‌ ರೆಡ್ಡಿ ಅವರನ್ನು ಕಳೆದುಕೊಂಡೆವು. ಇವರೆಲ್ಲರೂ ಅತ್ಯುತ್ತಮ ಸಂಸದರಾಗಿ ಮತ್ತು ಸಮರ್ಥ ನಾಯಕರಾಗಿ ಹೆಸರು ಮಾಡಿದವರು. ದೀರ್ಘಕಾಲದ ಆತ್ಮೀಯ ಮಿತ್ರನನ್ನು ಕಳೆದುಕೊಂಡ ನಾನು ಈಗ ಛಿದ್ರಗೊಂಡಿದ್ದೇನೆ. ಇದು ವೈಯಕ್ತಿಕವಾಗಿ ನನಗೆ ಮತ್ತು ಇಡೀ ರಾಷ್ಟ್ರಕ್ಕೆ ಆಗಿರುವ ದೊಡ್ಡ ನಷ್ಟ. ಅವರ ಆತ್ಮಕ್ಕೆ ಶಾಂತಿ ಲಭಿಸಲಿ.

ಲೇಖಕರು: ಉಪರಾಷ್ಟ್ರಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT