ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಬೆಡ್ಗಳನ್ನು ಸ್ಥಳೀಯ ರೋಗಿಗಳ ಬಳಕೆಗೆ ಮೀಸಲಿಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ಸರ್ಕಾರದ ಈ ನಿರ್ಧಾರವು ಕೇಂದ್ರ ಸರ್ಕಾರ ನಿರ್ವಹಿಸುವ ಏಮ್ಸ್, ಸಫ್ದರ್ಜಂಗ್ ಆಸ್ಪತ್ರೆಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Delhi’s health infrastructure is needed to tackle Corona crisis at the moment https://t.co/GnTaCTDVkx
ಇತರ ರಾಜ್ಯಗಳ ಜನರು ನಗರ ಪ್ರವೇಶಿಸಲು ಗಡಿಯನ್ನು ಮುಕ್ತಗೊಳಿಸಲಾಗುವುದು. ನಗರದ ಆಸ್ಪತ್ರೆಗಳು ಇತರ ರಾಜ್ಯಗಳ ಜನರಿಂದ ತುಂಬಿ ತುಳುಕುವುದನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಕೇಜ್ರಿವಾಲ್ ಸಮರ್ಥಿಸಿಕೊಂಡರು.
'ಐವರು ಸದಸ್ಯರ ಸಮಿತಿಯು ಪರಿಸ್ಥಿತಿಯನ್ನು ಅವಲೋಕಿಸಿ ವರದಿ ಸಲ್ಲಿಸಿದೆ. ಜೂನ್ ಮಾಸಾಂತ್ಯದ ವೇಳೆಗೆ ಸೋಂಕಿತರ ಚಿಕಿತ್ಸೆಗಾಗಿ ದೆಹಲಿಯಲ್ಲಿ 15,000 ಬೆಡ್ಗಳು ಬೇಕಾಗಬಹುದು ಎಂದು ಸಮಿತಿ ಅಂದಾಜಿಸಿದೆ. ಪ್ರಸ್ತುತ ದೆಹಲಿಯಲ್ಲಿ 10,000 ಬೆಡ್ಗಳು ಲಭ್ಯವಿವೆ. ಇದರಲ್ಲಿ ಕೇಂದ್ರ ಸರ್ಕಾರದ ಆಸ್ಪತ್ರೆಗಳ ಬೆಡ್ಗಳೂ ಸೇರಿವೆ. ದೆಹಲಿಯ ಆಸ್ಪತ್ರೆಯ ಸೇವೆ ಸ್ಥಳೀಯರಿಗೆ ಮಾತ್ರ ಮೀಸಲಿರಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು' ಎಂದು ಕೇಜ್ರಿವಾಲ್ ಹೇಳಿದರು.
'ದೆಹಲಿಯ ಗಡಿಗಳನ್ನು ಮುಕ್ತಗೊಳಿಸುತ್ತಿದ್ದೇವೆ. ಮಾಲ್, ರೆಸ್ಟೊರೆಂಟ್ಗಳು ಸೋಮವಾರದಿಂದ ಕಾರ್ಯಾರಂಭ ಮಾಡಲಿವೆ. ಆದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದರೆ, ಹೋಟೆಲ್ಗಳು ಮತ್ತು ಕಲ್ಯಾಣ ಮಂಟಪಗಳಲ್ಲೂ ಬೆಡ್ಗಳನ್ನು ಹಾಕಿ, ಚಿಕಿತ್ಸೆ ಕೊಡಬೇಕಾದೀತು' ಎಂದು ನುಡಿದರು.