ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ದರ ಕುಸಿತದ ಲಾಭ ಜನರಿಗೆ ನೀಡದೆ ಸುಂಕ ಹೆಚ್ಚಿಸಿದ ಜಾಣ ಪ್ರಧಾನಿ: ರಾಹುಲ್‌

Last Updated 15 ಮಾರ್ಚ್ 2020, 11:01 IST
ಅಕ್ಷರ ಗಾತ್ರ

ನವದೆಹಲಿ: ‘ಕಚ್ಚಾ ತೈಲ ದರದಲ್ಲಿ ಉಂಟಾಗಿರುವ ಕುಸಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿ ಎಂದು ಕೇಳಿದರೆ, ನಮ್ಮ ಜಾಣ ಪ್ರಧಾನಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕು ಹೆಚ್ಚಿಸಿದ್ದಾರೆ,’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ.

’ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿತ ಕಂಡಿದೆ. ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ನಾನು ಮೂರು ದಿನಗಳ ಹಿಂದೆ ಆಗ್ರಹಿಸಿದ್ದೆ. ನನ್ನ ಸಲಹೆಯನ್ನು ಪರಿಗಣಿಸದ ಜಾಣ ಪ್ರಧಾನಿ ತೈಲದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದಾರೆ,’ ಎಂದು ಅವರು ಟ್ವೀಟ್‌ ಮೂಲಕ ಟೀಕಿಸಿದ್ದಾರೆ.

ತೈಲ ಬೆಲೆ ಕುಸಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದ ಸರ್ಕಾರದ ಕ್ರಮದ ಕುರಿತ ಪ್ರಶ್ನೆಗಳನ್ನು ನಿರ್ಲಕ್ಷಿಸುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ವಿಡಿಯೊವನ್ನು ರಾಹುಲ್‌ ತಮ್ಮ ಟ್ವೀಟ್‌ನೊಂದಿಗೆ ಸೇರಿಸಿಕೊಂಡಿದ್ದಾರೆ.

ಮೂರು ದಿನಗಳ ಹಿಂದೆ ಟ್ವೀಟ್‌ ಮಾಡಿದ್ದ ರಾಹುಲ್‌ ಗಾಂಧಿ ಅವರು ‘ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರವೊಂದನ್ನು ಕೆಡುವುವುದರಲ್ಲಿ ನಿರತರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಶೇ. 35ರಷ್ಟು ದರ ಕುಸಿದಿರುವುದು ಗೊತ್ತೇ ಆಗಿಲ್ಲ. ತೈಲ ದರ ಕುಸಿತವನ್ನು ಪ್ರಧಾನಿ ಗ್ರಾಹಕರಿಗೆ ವರ್ಗಾಯಿಸಬೇಕು. ಪೆಟ್ರೋಲ್‌ ದರವನ್ನು ₹60 ಗೆ ನಿಗದಿ ಮಾಡಬೇಕು,’ ಎಂದಿದ್ದರು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಮುಖವಾಗಿದೆ. ಆದರೆ ಕೇಂದ್ರ ಸರ್ಕಾರ ಶನಿವಾರ ಅಬಕಾರಿ ಸುಂಕ ಹೆಚ್ಚಿಸುವ ಮೂಲಕ ದರ ಇಳಿಕೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿತು. ಹೀಗಾಗಿ ಗ್ರಾಹಕರಿಗೆ ಸುಂಕದ ಹೊರೆ ಬೀಳುವುದಿಲ್ಲವಾದರೂ, ದರ ಇಳಿಕೆ ಪ್ರಯೋಜನವೂ ಸಿಗದಂತಾಗಲಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ವಿಶೇಷ ಅಬಕಾರಿ ಸುಂಕವನ್ನು ಪ್ರತಿ ಲೀಟರಿಗೆ ₹ 3ರಂತೆ ಕೇಂದ್ರಏರಿಕೆ ಮಾಡಿದೆ. ಇದರಿಂದ ₹ 39 ಸಾವಿರ ಕೋಟಿ ಹೆಚ್ಚುವರಿ ವರಮಾನ ಸಂಗ್ರಹವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT