ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ದೆಹಲಿಯ ಶಹೀನ್ ಬಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಆಕ್ರೋಶ ವ್ಯಕ್ತಪಡಿಸಿದ್ದು, ಫೆ.8ರಂದು ನಡೆಯಲಿರುವ ಚುನಾವಣೆಯನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಸ್ಪರ್ಧೆ ಎಂದು ಹೇಳಿದ್ದಾರೆ.
‘ಫೆ.8ರಂದು ದೆಹಲಿಯ ರಸ್ತೆಗಳಲ್ಲಿ ಭಾರತ–ಪಾಕಿಸ್ತಾನ ನಡುವೆ ಸ್ಪರ್ಧೆ ನಡೆಯಲಿದೆ. ಈಗಾಗಲೇ ಪಾಕಿಸ್ತಾನ ಶಹೀನ್ ಬಾಗ್ ಪ್ರವೇಶಿಸಿದ್ದು, ದೆಹಲಿಯಲ್ಲಿ ಪಾಕಿಸ್ತಾನದ ಸಣ್ಣ ಪ್ರಾಂತಗಳನ್ನು ರಚಿಸಲಾಗುತ್ತಿದೆ’ ಎಂದು ಅವರು ಸರಣಿ ಟ್ವೀಟ್ಗಳಲ್ಲಿ ಹೇಳಿದ್ದಾರೆ.
‘ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಹಾಗೂ ಫೆ.11ರಂದು ಮತಎಣಿಕೆ ನಡೆಯುವ ವೇಳೆ ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ’ ಎಂದು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಎಎಪಿ ಸರ್ಕಾರದಲ್ಲಿ ಸಚಿವರಾಗಿದ್ದ ಅವರು ಈಗ ಬಿಜೆಪಿಯಿಂದ ಮಾಡೆಲ್ ಟೌನ್ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.