ನವದೆಹಲಿ: ಉನ್ನಾವ್ ಅತ್ಯಾಚಾರ ಪ್ರಕರಣದ ಆರೋಪಿ ಕುಲ್ದೀಪ್ ಸೆಂಗಾರ್ನ್ನು ಬಹಳ ಹಿಂದೆಯೇಅಮಾನತು ಮಾಡಿದ್ದೆವು ಎಂದು ಉತ್ತರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿರುವುದಾಗಿ ದಿ ವೈರ್ ವರದಿ ಮಾಡಿದೆ.
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕಾರು ಭಾನುವಾರ ಅಪಘಾತಕ್ಕೀಡಾಗಿದ್ದು, ಈ ಪ್ರಕರಣದಲ್ಲಿ ಸೆಂಗಾರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಸೆಂಗಾರ್ ಅವರನ್ನು ಬಹಳ ಹಿಂದೆಯೇ ಪಕ್ಷದಿಂದ ಅಮಾನತು ಮಾಡಿದ್ದೆವು. ಅಂದರೆ 2018ಏಪ್ರಿಲ್ನಲ್ಲಿಅವರನ್ನು ಅಮಾನತು ಮಾಡಿದ್ದೆವು ಎಂದು ಉತ್ತರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.
ಆದಾಗ್ಯೂ ಸೆಂಗಾರ್ ವಿರುದ್ಧ ಪ್ರಕರಣ ಸಾಬೀತು ಆದರೆ ಮಾತ್ರ ಅವರ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಬಿಜೆಪಿ ನಿರ್ಧರಿಸಲಿದೆ ಎಂದು ಬಿಜೆಪಿ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಮಹೇಂದ್ರ ನಾಥ್ ಪಾಂಡೆ ಹೇಳಿದ್ದರು ಎಂದು ಜುಲೈ 2018ರಲ್ಲಿ ನವ್ಭಾರತ್ ಟೈಮ್ಸ್ ವರದಿ ಮಾಡಿತ್ತು.
ಈ ಬಗ್ಗೆ ಮಂಗಳವಾರ ಮಾತನಾಡಿದ ಸ್ವತಂತ್ರ ದೇವ್ ಸಿಂಗ್, ಪಕ್ಷ ಮತ್ತು ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ, ಅದೇ ವೇಳೆ ನಾವು ಸಂತ್ರಸ್ತೆಗೆ ಬೆಂಬಲ ಸೂಚಿಸುವುದಾಗಿ ಹೇಳಿದ ಅವರು ಲಖನೌದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಗೆ ಎಲ್ಲ ರೀತಿಯ ನೆರವುಗಳನ್ನು ನೀಡಲಾಗುವುದು ಎಂದಿದ್ದಾರೆ.
ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಸಂಚರಿಸುತ್ತಿದ್ದ ಕಾರು ಭಾನುವಾರ ಅಪಘಾತಕ್ಕೀಡಾಗಿದ್ದು, ಕುಟುಂಬದ ಇಬ್ಬರು ಸದಸ್ಯರು ಸಾವಿಗೀಡಾಗಿದ್ದರು, ಅಪಘಾತದಲ್ಲಿ ಸಂತ್ರಸ್ತೆ ಮತ್ತು ವಕೀಲರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.ಇದೊಂದು ಸಂಚು ಎಂದು ಸಂತ್ರಸ್ತೆಯ ಕುಟುಂಬದವರು ದೂರಿದ್ದಾರೆ. ಅದೇ ವೇಳೆ ಕಾರಿಗೆ ಡಿಕ್ಕಿ ಹೊಡೆದಿರುವ ಟ್ರಕ್ನ ನಂಬರ್ ಪ್ಲೇಟ್ನ್ನು ಕಪ್ಪು ಬಣ್ಣದಿಂದ ಮರೆ ಮಾಡಿರುವುದು ಹೆಚ್ಚಿನ ಸಂದೇಹಗಳನ್ನು ಹುಟ್ಟು ಹಾಕಿದೆ.
ಬಾಂಗರ್ಮವು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾದ ಸೆಂಗಾರ್ ಅವರನ್ನು ಕಳೆದ ವರ್ಷ ಏಪ್ರಿಲ್ನಲ್ಲಿ ಬಂಧಿಸಲಾಗಿತ್ತು.
ಸೆಂಗಾರ್ನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಮಂಗಳವಾರ ಹೇಳಿದ್ದಾರೆ.ಶರ್ಮಾ ಅವರು ಕಿಂಗ್ ಜಾರ್ಜ್ಸ್ ಮೆಡಿಕಲ್ ಯುನಿವರ್ಸಿಟಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯನ್ನು ಭೇಟಿ ಮಾಡಿದ್ದಾರೆ.
ಸೆಂಗಾರ್ ಅವರನ್ನು ಅಮಾನತು ಮಾಡಲಾಗಿದೆ. ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಧ್ಯಮದವರಲ್ಲಿ ಹೇಳಿದ್ದಾರೆ ಶರ್ಮಾ.
ಆರೋಪಿ ಸೆಂಗಾರ್ನ್ನುಪಕ್ಷದಿಂದ ಉಚ್ಛಾಟಿಸಬೇಕು ಎಂದು ಪ್ರಿಯಾಂಕಾ ಗಾಂಧಿ ಮಂಗಳವಾರ ಬೆಳಗ್ಗೆ ಟ್ವೀಟ್ ಮಾಡಿದ್ದರು.
Why do we give people like Kuldeep Sengar the strength and protection of political power and abandon their victims to battle for their lives alone?
— Priyanka Gandhi Vadra (@priyankagandhi) July 30, 2019
This FIR clearly states that the family was threatened and apprehensive. It even mentions the possibility of a planned accident.
For God’s sake, Mr. Prime Minister, divest this criminal and his brother of the political power your party is giving them.
— Priyanka Gandhi Vadra (@priyankagandhi) July 30, 2019
Its still not too late.#BJPSackSengar
ಪ್ರಧಾನಿಯವರೇ, ಈ ಅಪರಾಧಿಯನ್ನು ಉಚ್ಛಾಟಿಸಿ ಮತ್ತು ಆತನ ಸಹೋದರನಿಗೆ ನಿಮ್ಮ ಪಕ್ಷ ನೀಡುತ್ತಿರುವ ರಾಜಕೀಯ ಅಧಿಕಾರವನ್ನು ದಯವಿಟ್ಟು ನಿಲ್ಲಿಸಿ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದರು.
ಲಖನೌದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ್ದು, ಸೆಂಗಾರ್ನನ್ನು ಬಿಜೆಪಿಯಿಂದ ಉಚ್ಛಾಟಿಸಿ ಎಂದು ಧರಣಿ ನಡೆಸಿದ್ದಾರೆ. ಬಿಜೆಪಿ ಕಚೇರಿ ಕಡೆ ರ್ಯಾಲಿ ನಡೆಸಿದ್ದಕ್ಕಾಗಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಿಎಸ್ಪಿ ನಾಯಕಿ ಮಾಯಾವತಿ ಕೂಡಾ ಬಿಜೆಪಿಯನ್ನುಟೀಕಿಸಿದ್ದಾರೆ.ಬಿಜೆಪಿ ಸಂಸದ ಸಾಕ್ಷಿ ಮಹರಾಜ್ ಅವರು ಅತ್ಯಾಚಾರ ಆರೋಪಿ ಬಿಜೆಪಿ ಶಾಸಕರನ್ನು ಜೈಲಿನಲ್ಲಿ ಭೇಟಿಯಾಗಿದ್ದಾರೆ, ಅತ್ಯಾಚಾರದ ಆರೋಪಿಗೆ ಆಡಳಿತರೂಢ ಬಿಜೆಪಿ ಸದಾ ಸಹಕಾರ ನೀಡುತ್ತಿದೆ, ಸುಪ್ರೀಂಕೋರ್ಟ್ ಈ ಬಗ್ಗೆ ಗಮನ ಹರಿಸಬೇಕು ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆಸ್ಪತ್ರೆಗೆ ತೆರಳಿ ಸಂತ್ರಸ್ತೆಯನ್ನು ಭೇಟಿ ಮಾಡಿದ್ದಾರೆ.
ಆರೋಗ್ಯ ಇನ್ನೂ ಸುಧಾರಿಸಿಲ್ಲ
ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಸಂತ್ರಸ್ತೆ ಮತ್ತು ಆಕೆಯ ವಕೀಲರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.ಇಬ್ಬರನ್ನೂ ವೆಂಟಿಲೇಟರ್ನಲ್ಲಿ ಐಸಿಯುನಲ್ಲಿಡಲಾಗಿದೆ ಎಂದು ಆಸ್ಪತ್ರೆಯ ವಕ್ತಾರ ಸಂದೀಪ್ ತಿವಾರಿ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಗೆ ಉತ್ತಮ ಚಿಕಿತ್ಸೆ ನೀಡಲಾಗುವುದು.ಅಗತ್ಯ ಬಂದರೆ ಉತ್ತಮ ವೈದ್ಯರನ್ನೂ ಕರೆಸುತ್ತೇವೆ, ಸಂತ್ರಸ್ತೆಯ ಕುಟುಂಬದ ಆರೋಪದಂತೆ ನಾವು ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಂಡು ಎಫ್ಐಆರ್ ದಾಖಲಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಶರ್ಮಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.