ಧಾರವಾಡ : ‘ಜಂಗಮರೆಂದರೆ, ಅವರೇನು ಮೇಲಿನಿಂದ ಉದುರಿದವರು ಅಲ್ಲ; ನೆಲದಿಂದ ಉದ್ಭವವಾದವರೂ ಅಲ್ಲ’ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಕೂಡ ಒಬ್ಬ ಜಂಗಮನೇ. ವೀರಶೈವ, ಲಿಂಗಾಯತದ ಒಂದು ಪಂಗಡ. ಎಲ್ಲರೂ ಕಾಯಕ ನಿಷ್ಠೆ ಹೊಂದಿ ಲಿಂಗಾಯತರಾಗಬೇಕು. ವೀರಶೈವ ಮಠಾಧೀಶರು, ಲಿಂಗಾಯತ ಧರ್ಮದ ಸತ್ಯ ಒಪ್ಪಿಕೊಂಡು ಅದರೊಳಗೆ ಬರಬೇಕು’ ಎಂದರು.
‘ಲಿಂಗಾಯತ ಧರ್ಮ ವಿಷಯದಲ್ಲಿ ರಾಜ್ಯ ಸರ್ಕಾರ ಕೈಗೊಂಡ ನಿರ್ಣಯ ಬಹಳ ಸಂತಸ ತಂದಿದೆ. ಇದು ಐತಿಹಾಸಿಕ ಮಹತ್ವದ ನಿರ್ಣಯ. ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಜಕೀಯವಾಗಿ ಲಿಂಗಾಯತ ಸಮುದಾಯ ಬಲಾಢ್ಯವಾಗಿದೆ. ಮನೋವಾದದ ವಿರುದ್ಧ ಕ್ರಾಂತಿ ಮಾಡಿದ ಧರ್ಮಕ್ಕೆ ನ್ಯಾಯ ಸಿಕ್ಕಿದೆ’ ಎಂದು ಹೇಳಿದರು.