ನವದೆಹಲಿ: ಕಪ್ಪುಪಟ್ಟಿಗೆ ಸೇರಿರುವ2,550ವಿದೇಶಿ ತಬ್ಲಿಗಿ ಜಮಾತ್ ಸದಸ್ಯರಿಗೆ 10 ವರ್ಷ ಭಾರತ ಪ್ರವೇಶಿಸದಂತೆ ನಿಷೇಧಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಎಎನ್ಐ ಸುದ್ದಿ ಸಂಸ್ಥೆ, ತಬ್ಲಿಗಿ ಜಮಾತ್ನ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 2,550ಸದಸ್ಯರಿಗೆ ಹತ್ತು ವರ್ಷಗಳ ಕಾಲ ಭಾರತ ಪ್ರವೇಶಿಸದಂತೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದೆ. ನಿಷೇಧಕ್ಕೆ ಒಳಪಟ್ಟ ತಬ್ಲಿಗಿ ಜಮಾತ್ ಸದಸ್ಯರನ್ನು ಈಗಾಗಲೇ ಕಪ್ಪುಪಟ್ಟಿಗೆ ಸೇರಿಸಲಾಗಿತ್ತು.
ಕಳೆದ ಏಪ್ರಿಲ್ನಲ್ಲಿ, ದೇಶದಾದ್ಯಂತ ದೃಢಪಟ್ಟಿದ್ದ ಸಾವಿರಾರು ಕೊರೊನಾ ವೈರಸ್ ಸೋಂಕು ಪ್ರಕರಣಗಳು ದೆಹಲಿಯ ನಿಜಾಮುದ್ದೀನ್ನ ತಬ್ಲಿಗಿ ಜಮಾತ್ ಸಭೆಯಿಂದ ಹರಡಿರುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿತ್ತು.
ಈ ಪ್ರಕರಣಗಳು ದೇಶದ 23 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಪಟ್ಟಿದ್ದವು. ಮಾರ್ಚ್ನಲ್ಲಿ ದೆಹಲಿಯ ನಿಜಾಮುದ್ದೀನ್ನ ತಬ್ಲಿಗಿ ಜಮಾತ್ ಸಭೆಯಲ್ಲಿ ಹಲವು ದೇಶಗಳ ಪ್ರಜೆಗಳು ಭಾಗಿಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.