ನವದೆಹಲಿ: ಲಡಾಖ್ನಲ್ಲಿನ ಗಾಲ್ವನ್ ಕಣಿವೆಯಲ್ಲಿ ಚೀನಾದ ದಾಳಿಯು ಪೂರ್ವ ನಿಯೋಜಿತ ಎಂಬುದು ಸ್ಪಷ್ಟ. ಕೇಂದ್ರ ಸರ್ಕಾರ ಗಾಢ ನಿದ್ರೆಯಲ್ಲಿದ್ದ ಕಾರಣ ಯೋಧರು ಬೆಲೆ ತೆರಬೇಕಾಯಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಚೀನಾ– ಭಾರತ ಗಡಿ ಪರಿಸ್ಥಿತಿ ಕುರಿತಂತೆ ಪ್ರಧಾನಿ ಮೋದಿ ಅವರ ಸಭೆಗೆ ಮೊದಲೇ ರಾಹುಲ್ ಅವರ ಈ ಹೇಳಿಕೆ ಹೊರಬಿದ್ದಿದೆ.
ಕಣಿವೆಯಲ್ಲಿ ಕರ್ನಲ್ ಸೇರಿದಂತೆ ಭಾರತದ 20 ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಈ ಗಡಿ ಭಾಗದಲ್ಲಿ ಐದು ದಶಕಗಳಲ್ಲಿ ನಡೆದ ಅತ್ಯಂತ ದೊಡ್ಡ ಸೇನಾ ಘರ್ಷಣೆ ಇದು. ಈ ಘಟನೆ ಗಡಿ ಬಿಕ್ಕಟ್ಟನ್ನು ತಾರಕಕ್ಕೆ ಏರಿಸಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕೇಂದ್ರ ಸರ್ಕಾರ ನಿದ್ರಿಸಿದ್ದು ಗಡಿಯಲ್ಲಿ ಸಮಸ್ಯೆ ಇದೆ ಎಂಬುದನ್ನು ಅಲ್ಲಗಳೆದಿತ್ತು. ಆದರೆ ಈಗ ಯೋಧರು ಬೆಲೆ ತೆರಬೇಕಾಯಿತು ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ಚೀನಾದ ದಾಳಿ ಪೂರ್ವ ನಿಯೋಜಿತ ಎಂದಿರುವ ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಅವರ ಹೇಳಿಕೆಯನ್ನೂ ಅವರು ಟ್ಯಾಗ್ ಮಾಡಿದ್ದಾರೆ.