ನವದೆಹಲಿ:ಥಾಯ್ಲೆಂಡ್ ಹಾಗೂ ಮಲೇಷ್ಯಾಗೆ ಭೇಟಿ ನೀಡಿ ಮರಳಿದ್ದ ದೆಹಲಿ ಮೂಲದ ವ್ಯಕ್ತಿಯೊಬ್ಬರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿಸೋಂಕು ಪೀಡಿತರ ಸಂಖ್ಯೆ 31ಕ್ಕೆ ಏರಿದೆ.
‘ದೆಹಲಿ ಮೂಲದ 25 ವರ್ಷದ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಆರೋಗ್ಯಸ್ಥಿತಿ ಸ್ಥಿರವಾಗಿದೆ. ನಿಗಾ ಇರಿಸಲಾಗಿದೆ’ ಎಂದುಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದರು.
‘ಇವರ ಕುಟುಂಬದ ಏಳು ಸದಸ್ಯರ ಆರೋಗ್ಯದ ಮೇಲೂ ನಿಗಾ ಇರಿಸಲಾಗಿದ್ದು, ಪ್ರತ್ಯೇಕವಾಗಿ ಇರಿಸಲಾಗಿದೆ. ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.
ಸೋಂಕು ವ್ಯಾಪಿಸುವುದನ್ನು ತಡೆಯಲು ಮುಂಜಾಗ್ರತೆಯಾಗಿ ವಿವಿಧ ಕ್ರಮಗಳನ್ನು ಕೈಗೊಂಡಿದ್ದು, ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಸಾರ್ವಜನಿಕರಿಗೆ ಕಟ್ಟೆಚ್ಚರ ನೀಡಲಾಗಿದೆ.
ಮುಂಜಾಗ್ರತೆಯಾಗಿ ಶಾಲೆಗಳಲ್ಲಿ ಬೆಳಗಿನ ಸಾಮೂಹಿಕ ಪ್ರಾರ್ಥನೆ ನಡೆಸಬಾರದು ಮತ್ತು ಶಾಲೆಗಳಲ್ಲಿ ಹಾಜರಾತಿ ದಾಖಲಾತಿಗೆ ಬಯೊಮೆಟ್ರಿಕ್ ಪದ್ಧತಿ ಕೈಬಿಡಲು ದೆಹಲಿ ಸರ್ಕಾರ ನಿರ್ದೇಶಿಸಿದೆ.
ಮಾರ್ಚ್ ಅಂತ್ಯದವರೆಗೆ ಕೇಂದ್ರ ಸರ್ಕಾರದ ಎಲ್ಲ ನೌಕರರಿಗೆ ಬಯೋಮೆಟ್ರಿಕ್ ಹಾಜರಾತಿಯಿಂದ ವಿನಾಯಿತಿ ನೀಡಿ ಸಿಬ್ಬಂದಿ ಮತ್ತು ಆಡಳಿತ ತರಬೇತಿ ಸಚಿವಾಲಯ ಸುತ್ತೋಲೆ ಹೊರಡಿಸಿದೆ.ಸಂಸತ್ ಆವರಣದಲ್ಲಿ ಸಭೆ, ಸಮಾರಂಭಗಳನ್ನು ನಡೆಸದಂತೆ ಸೂಚಿಸಿದೆ.
‘ತಾಜ್ ಮಹಲ್’ಗೂ ವೀಕ್ಷಣೆಗೂ ನಿರ್ಬಂಧ? ಪ್ರತಿನಿತ್ಯ 25 ಸಾವಿರಕ್ಕೂ ಅಧಿಕ ಪ್ರವಾಸಿಗರನ್ನು ಸೆಳೆಯುವ ತಾಜ್ ಮಹಲ್ ವೀಕ್ಷಣೆಗೆ ತಾತ್ಕಾಲಿಕವಾಗಿ ಪ್ರವಾಸಿಗರಿಗೆ ನಿರ್ಬಂಧ ಹೇರುವ ಸಾಧ್ಯತೆ ಇದೆ.
ಸೋಂಕು ಭೀತಿ ಹಿನ್ನೆಲೆಯಲ್ಲಿ ತಾಜ್ ಮಹಲ್ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲು ಆಗ್ರಹಿಸಿಆಗ್ರಾದ ಮೇಯರ್ ನವೀನ್ ಜೈನ್ ಕೇಂದ್ರದ ಪ್ರವಾಸೋದ್ಯಮ ಸಚಿವರಿಗೆಪತ್ರ ಬರೆದಿದ್ದಾರೆ.