ನವದೆಹಲಿ: ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಬಗ್ಗೆ ಮತ್ತು ಬಾಬರಿ ಮಸೀದಿ ಕೆಡವಿದ ವಿಚಾರವಾಗಿ ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಸಾಧ್ವಿ ಪ್ರಜ್ಞಾ ಸಿಂಗ್ ಅವರಿಗೆ ಚುನಾವಣಾ ಆಯೋಗವು 72 ಗಂಟೆಗಳ ಕಾಲ ಪ್ರಚಾರ ನಿಷೇಧ ಶಿಕ್ಷೆ ವಿಧಿಸಿದೆ.
ಗುರುವಾರ (ಮೇ 2) ಬೆಳಿಗ್ಗೆ 6 ಗಂಟೆಯಿಂದ ನಿಷೇಧ ಶಿಕ್ಷೆ ಜಾರಿಗೆ ಬರಲಿದೆ.
ಪ್ರಜ್ಞಾ ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿರುವ ಆಯೋಗವು, ಇನ್ನು ಮುಂದೆ ಇಂಥ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿದೆ. ‘ಕರ್ಕರೆ ಬಗ್ಗೆ ನೀಡಿರುವ ಹೇಳಿಕೆಗೆ ಪ್ರಜ್ಞಾ ಕ್ಷಮೆ ಯಾಚಿಸಿರುವುದು ನಿಜ. ಆದರೆ ಅಂಥ ಹೇಳಿಕೆ ನೀಡುವ ಅಗತ್ಯ ಇರಲಿಲ್ಲ’ ಎಂದು ಆಯೋಗ ಅಭಿಪ್ರಾಯಪಟ್ಟಿದೆ.