ನವದೆಹಲಿ: ಹಾಸನ ಲೋಕಸಭೆ ಚುನಾವಣೆಯ ಮತದಾನದ ಮುನ್ನಾದಿನ ಹೊಳೆನರಸೀಪುರದಲ್ಲಿ ಸಚಿವ ಎಚ್.ಡಿ.ರೇವಣ್ಣ ಬೆಂಗಾವಲುಪಡೆ ವಾಹನದಲ್ಲಿ ಹಣ ಸಾಗಿಸಿದ್ದ ಪ್ರಕರಣ ಕುರಿತು ಸ್ವತಂತ್ರ ತನಿಖೆಗೆ ಆದೇಶಿಸುವಂತೆ ಕೋರಿ ಕರ್ನಾಟಕದ ಬಿಜೆಪಿ ನಿಯೋಗವು ಕೇಂದ್ರ ಚುನಾವಣಾ ಆಯೋಗಕ್ಕೆ ಗುರುವಾರ ಮನವಿ ಸಲ್ಲಿಸಿತು.
‘ಬೆಂಗಾವಲುಪಡೆಯ ವಾಹನದಲ್ಲಿ ₹ 1.20 ಲಕ್ಷ ನಗದು ವಶಪಡಿಸಿಕೊಂಡ ಪ್ರಕರಣ ಕುರಿತು ಇದುವರೆಗೆ ತನಿಖೆ ನಡೆಸಿ ಕ್ರಮ ಕೈಗೊಂಡಿಲ್ಲ’ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಕೆ.ಮುರುಳೀಧರ ರಾವ್ ಸುದ್ದಿಗಾರರಿಗೆ ತಿಳಿಸಿದರು.
‘ಪೊಲೀಸ್ ವಾಹನ ಮತ್ತು ಸಿಬ್ಬಂದಿಯನ್ನು ಬಳಸಿಕೊಂಡು ಹಣ ಸಾಗಣೆ ಮಾಡಲಾಗಿದೆ. ಈ ಕುರಿತು ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಹೇಳಿದರು.
‘ರೇವಣ್ಣ ಅವರ ಪುತ್ರ ಪ್ರಜ್ವಲ್ ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಈ ಅಕ್ರಮ ಬಯಲಾಗಿದೆ. ಈ ಬಗ್ಗೆ ಎಫ್ಐಆರ್ ದಾಖಲಾಗಿದ್ದರೂ ಸಮಗ್ರ ತನಿಖೆ ನಡೆದಿಲ್ಲ’ ಎಂದು ಆರೋಪಿಸಿದರು.
ರಾಜ್ಯದಲ್ಲಿ ಚುನಾವಣೆ ಸಂದರ್ಭ ನಡೆದಿರುವ ಅಕ್ರಮಗಳ ಕುರಿತು ಪಕ್ಷವು ಚುನಾವಣಾ ಆಯೋಗಕ್ಕೆ 272 ದೂರುಗಳನ್ನು ಸಲ್ಲಿಸಿದೆ’ ಎಂದು ಹೇಳಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಹಾಗೂ ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಹಾಜರಿದ್ದರು.