ಕೊಲ್ಕತ್ತಾ: ಕೇಂದ್ರ ಸಚಿವ, ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದ ಬಿಜೆಪಿ ಸಂಸದ ಬಬುಲ್ ಸುಪ್ರಿಯೋ ಅವರು ಚುನಾವಣೆ ಉದ್ದೇಶಕ್ಕಾಗಿಯೇ ಸಂಯೋಜಿದ್ದ ಗೀತೆಯನ್ನು ಇನ್ನು ಮುಂದೆ ಎಲ್ಲಿಯೂ ಬಳಸಬಾರದು ಎಂದು ಕೇಂದ್ರ ಚುನಾವಣೆ ಆಯೋಗ ತಾಕೀತು ಮಾಡಿದೆ.
ಅಮಿತ್ ಚಕ್ರಬೋರ್ತಿ ಎಂಬುವವರ ಸಾಹಿತ್ಯವುಳ್ಳ ಚುನಾವಣಾ ಗೀತೆ ‘ಪಶ್ಚಿಮ ಬಂಗಾಳದಲ್ಲಿ ಕಮಲ ಅರಳುತ್ತಿದೆ. ತೃಣಮೂಲ ಕಾಂಗ್ರೆಸ್ ಅನ್ನು ಜನ ತಿರಸ್ಕರಿಸುತ್ತಿದ್ದಾರೆ,‘ ಎಂಬರ್ಥದಲ್ಲಿತ್ತು. ಇದನ್ನು ಕೇಂದ್ರ ಸಚಿವ ಬಬುಲ್ ಸುಪ್ರಿಯೋ ಸಂಯೋಜಿಸಿದ್ದರು. ಈ ಹಾಡಿನ ಸಾಲುಗಳನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ#EiTrinamoolArNa ಟ್ಯಾಗ್ನಡಿಯಲ್ಲಿ ಹಂಚಿಕೊಂಡಿದ್ದರು."Ei Trinamool ar na" ಎಂದರೆ ‘ತೃಣಮೂಲ ಕಾಂಗ್ರೆಸ್ ಇನ್ನಿಲ್ಲ,’ ಎಂದು.
ಇದರ ವಿರುದ್ಧ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಚುನಾವಣೆ ಆಯೋಗಕ್ಕೆ ದೂರು ನೀಡಿತ್ತು. ಇದೇ ಹಿನ್ನೆಲ್ಲೆಯಲ್ಲಿ ಶನಿವಾರ ಬಿಜೆಪಿಗೆ ಸೂಚನೆ ನೀಡಿರುವ ಮುಖ್ಯ ಚುನಾವಣಾಧಿಕಾರಿ ಇನ್ನು ಮುಂದೆ ಎಲ್ಲಿಯೂ ಈ ಗೀತೆಯನ್ನು ಬಳಸಕೂಡದು ಎಂದು ಸೂಚಿಸಿದೆ.
#EiTrinamoolArNa#AsansolerPriyoBabulSupriyo #PhirEkBaarModiSarkar pic.twitter.com/eutd1nSLOm
— Team Babul Supriyo (@TeamBabul) April 7, 2019
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಸಂಜಯ್ ಬಸು, ‘ಈ ಚುನಾವಣೆ ಗೀತೆಗೆ ಮೊಟ್ಟ ಮೊದಲಾಗಿ ಆಯೋಗದಿಂದ ಅನುಮತಿಯನ್ನೇ ಪಡೆದಿಲ್ಲ. ಈ ವಿಚಾರವನ್ನು ನಾವು ಈಗಾಗಲೇ ಕೇಂದ್ರ ಚುನಾವಣೆ ಆಯೋಗಕ್ಕೆ ತಿಳಿಸಿದ್ದೇವೆ. ಈ ಚುನಾವಣೆ ಗೀತೆಯನ್ನು ರಾಜ್ಯದ ಕೆಲ ಭಾಗಗಳಲ್ಲಿ ಬಳಸಲಾಗಿದೆ. ಈ ಕೂಡಲೇ ಅದನ್ನು ನಿಲ್ಲಿಸುವಂತೆ ತಾಕೀತು ಮಾಡಲಾಗಿದೆ,‘ ಎಂದು ಹೇಳಿದ್ದಾರೆ.
ಇದೇ ವೇಳೆ ಹಾಡಿಗೆ ಅನುಮತಿ ನೀಡುವಂತೆ ಬಿಜೆಪಿಯ ನಾಯಕರೊಬ್ಬರು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿಗೆ ಕೋರಿದ್ದಾರೆ. ಅವರ ಮನವಿಯನ್ನು ಚುನಾವಣೆ ಆಯೋಗಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.