ನವದೆಹಲಿ: ಬಿಜೆಪಿ ಕೇಂದ್ರ ನಾಯಕತ್ವದ ವಿರುದ್ಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತೊಮ್ಮೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಪಕ್ಷದ ಸಂಸದರು, ಶಾಸಕರು ಸರಿಯಾಗಿ ಕೆಲಸ ಮಾಡದಿದ್ದರೆ ಅದಕ್ಕೆ ಆಯಾ ಪಕ್ಷಗಳ ಮುಖ್ಯಸ್ಥರೇ ಹೊಣೆ ಹೊರಬೇಕು ಎಂದು ತಾಕೀತು ಮಾಡಿದ್ದಾರೆ.
ಸೋಮವಾರ ಸಂಜೆ ನಡೆದ ಗುಪ್ತಚರ ವಿಭಾಗದ ವಾರ್ಷಿಕ ದತ್ತಿ ಉಪನ್ಯಾಸದ ವೇಳೆ ಅಧಿಕಾರಿಗಳ ಜತೆ ಸಂವಾದ ನಡೆಸಿದ ಗಡ್ಕರಿ ಅವರು ’ನಾನೇನಾದರೂ ಪಕ್ಷದ ಅಧ್ಯಕ್ಷನಾಗಿದ್ದು, ನಮ್ಮ ಪಕ್ಷದ ಶಾಸಕರು ಮತ್ತು ಸಂಸದರು ಸರಿಯಾಗಿ ಕೆಲಸ ಮಾಡದಿದ್ದರೆ ಅದರ ಹೊಣೆ ಹೊರುತ್ತಿದ್ದೆ’ ಎಂದಿದ್ದಾರೆ.
ಆ ಮೂಲಕ ಪಕ್ಷದ ಅಧ್ಯಕ್ಷ ಅಮಿತ್ ಶಾ ವಿರುದ್ಧ ಮತ್ತೊಮ್ಮೆ ಗಡ್ಕರಿ ಅವರು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ವಾರ ಪುಣೆಯಲ್ಲಿ ಮಾತನಾಡಿದ್ದ ಗಡ್ಕರಿ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಗುರಿಯಾಗಿಟ್ಟುಕೊಂಡು ಗಡ್ಕರಿ ಈ ರೀತಿ ಹೇಳಿದ್ದಾರೆ ಎಂದು ಹೇಳಲಾಗಿತ್ತು.
ಇದನ್ನು ನಿರಾಕರಿಸಿದ್ದ ಅವರು ಮಾಧ್ಯಮದವರು ತಮ್ಮ ಹೇಳಿಕೆಯನ್ನು ತಿರುಚಿದ್ದಾರೆ. ಬಿಜೆಪಿ ನಾಯಕರಲ್ಲಿ ಒಡಕು ಮೂಡಿಸುವ ಷಡ್ಯಂತ್ರ ಎಂದು ಪ್ರತಿಕ್ರಿಯಿಸಿದ್ದರು.