ನವದೆಹಲಿ: ‘ಗಂಗಾ ನದಿ ಹಾದು ಹೋಗುವ 39 ಸ್ಥಳಗಳಲ್ಲಿ, ಕೇವಲ ಒಂದು ಸ್ಥಳದಲ್ಲಿ ಮಾತ್ರ ನದಿಯ ನೀರು ಶುದ್ಧವಾಗಿದೆ. ಉಳಿದೆಲ್ಲೆಡೆ ನೀರು ಮಲಿನಗೊಂಡಿದೆ’ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ಮಂಡಳಿಯು ಮುಂಗಾರಿಗೂ ಮುನ್ನ ಮತ್ತು ಮುಂಗಾರಿನ ನಂತರ ಈ ಸ್ಥಳಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಅವುಗಳನ್ನು ಪರಿಶೀಲಿಸಿತ್ತು.ಸುಪ್ರೀಂ ಕೋರ್ಟ್ನ ನಿರ್ದೇಶನದ ಮೇರೆಗೆ ಈ ಅಧ್ಯಯನ ನಡೆಸಲಾಗಿತ್ತು. ಈಗ ಅಧ್ಯಯನದ ವರದಿಯನ್ನು ಮಂಡಳಿಯು ಬಿಡುಗಡೆ ಮಾಡಿದೆ.
‘ಮುಂಗಾರಿಗೂ ಮುನ್ನ 41 ಸ್ಥಳಗಳಲ್ಲಿ ಅಧ್ಯಯನ ನಡೆಸಲಾಗಿತ್ತು. ಅವುಗಳಲ್ಲಿ 37 ಸ್ಥಳಗಳಲ್ಲಿ ನೀರು ಅಪಾಯಕಾರಿ ಮಟ್ಟದಲ್ಲಿ ಮಲಿನಗೊಂಡಿತ್ತು. ಒಂದು ಸ್ಥಳದಲ್ಲಿ ಮಾತ್ರ ನೀರು ಶುದ್ಧವಾಗಿತ್ತು. ಉಳಿದ ಮೂರು ಸ್ಥಳಗಳಲ್ಲಿ ನೀರು ಸ್ವಲ್ಪ ಮಲಿನಗೊಂಡಿತ್ತು’ ಎಂದು ವರದಿಯಲ್ಲಿ ವಿವರಿಸಲಾಗಿದೆ.
‘ಮುಂಗಾರಿನ ನಂತರವೂ ಸುಧಾರಣೆ ಕಂಡುಬಂದಿಲ್ಲ. ಈ ಅವಧಿಯಲ್ಲಿ 39 ಸ್ಥಳಗಳಲ್ಲಿ ಅಧ್ಯಯನ ನಡೆಸಲಾಗಿತ್ತು. ಅವುಗಳಲ್ಲಿ ಒಂದರಲ್ಲಷ್ಟೇ ನೀರು ಶುದ್ಧವಾಗಿದೆ. ಇನ್ನೊಂದರಲ್ಲಿ ನೀರು ಸ್ವಲ್ಪ ಮಾತ್ರ ಮಲಿನವಾಗಿದೆ. ಉಳಿದ 37 ಸ್ಥಳಗಳಲ್ಲೂ ನೀರು ಅತ್ಯಂತ ಮಲಿನವಾಗಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.
‘ಕೈಗಾರಿಕಾ ತ್ಯಾಜ್ಯಗಳು ಮತ್ತು ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಹರಿಬಿಡುವ ಪದಾರ್ಥಗಳಿಂದಲೇ ಗಂಗಾ ನದಿ ಮಲಿನವಾಗುತ್ತಿದೆ.ನದಿ ಶುದ್ಧೀಕರಣಕ್ಕೆ ಕೈಗೊಂಡ ಯಾವ ಕ್ರಮಗಳೂ ಪರಿಣಾಮ ಬೀರಿಲ್ಲ’ ಎಂದು ಮಂಡಳಿ ಹೇಳಿದೆ.