ಲಖನೌ: ಪ್ರೀತಿಸಿದ ಕಾರಣಕ್ಕೆ ಭುಜೈನಿ ಗ್ರಾಮದ ಯುವಕ ಅಂಬಿಕ ಪಟೇಲ್ನನ್ನು ಮರಕ್ಕೆ ಕಟ್ಟಿ ಹಾಕಿ ಜೀವಂತವಾಗಿ ಸುಟ್ಟಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಪ್ರತಾಪಗಡ ಜಿಲ್ಲೆಯಲ್ಲಿ ನಡೆದಿದೆ.
ತನ್ನದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ ಅಂಬಿಕನಿಗೆ ಹುಡುಗಿಯ ಮನೆಯಿಂದ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಅವರಿಬ್ಬರು ಇದ್ದ ಖಾಸಗಿ ಫೋಟೋ ಒಂದನ್ನು ಹಂಚಿದ್ದ ಕಾರಣಕ್ಕೆ ಪ್ರಕರಣ ದಾಖಲಾಗಿ ಪೊಲೀಸರು ಅಂಬಿಕನನ್ನು ಬಂಧಿಸಿದ್ದರು.
ಈಚೆಗಷ್ಟೆ ಪೆರೊಲ್ ಮೇಲೆ ಬಂದಿದ್ದ ಆತನನ್ನು ಹುಡುಗಿಯ ಮನೆಯವರು ಮರವೊಂದಕ್ಕೆ ಕಟ್ಟಿ ಹಾಕಿ, ಮನಸೋ ಇಚ್ಛೆ ಥಳಿಸಿದ್ದಾರೆ. ನಂತರ ಪೆಟ್ರೋಲ್ ಹಾಕಿ ಜೀವಂತ ವಾಗಿ ಸುಟ್ಟು ಹಾಕಿದ್ದಾರೆ. ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.