ಭುವನೇಶ್ವರ್: ದೇಶದೊಳಗೆ ವರ್ಷದಲ್ಲಿ ಕನಿಷ್ಠ 15 ಸ್ಥಳಗಳ ಪ್ರವಾಸ ನಡೆಸುವವರಿಗೆ ಸರ್ಕಾರ ಪ್ರಯಾಣದ ಖರ್ಚು ಭರಿಸುವ ಮೂಲಕ ಉತ್ತೇಜನನೀಡಲು ನಿರ್ಧರಿಸಿರುವುದಾಗಿ ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹೇಳಿದರು.
ಕೊನಾರ್ಕ್ನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ರಾಷ್ಟ್ರೀಯ ಪ್ರವಾಸ ಸಮ್ಮೇಳನದ ಸಮಾರೋಪ ಸಭೆಯಲ್ಲಿ ಶುಕ್ರವಾರ ಅವರು ಮಾತನಾಡಿದರು.
ಒಂದು ವರ್ಷದಲ್ಲಿ ದೇಶದ 15 ಸ್ಥಳಗಳಲ್ಲಿ ಪ್ರವಾಸ ಕೈಗೊಂಡವರಿಗೆ ಪ್ರವಾಸೋದ್ಯಮ ಸಚಿವಾಲಯವು ಪ್ರಯಾಣದ ಖರ್ಚು ನೀಡಲಿದೆ. ಸಚಿವಾಲಯದ ವೆಬ್ಸೈಟ್ಗೆ ಫೋಟೊ ಸಲ್ಲಿಸುವ ಮೂಲಕ ಪ್ರೋತ್ಸಾಹ ಧನವನ್ನು ಪಡೆಯಬಹುದಾಗಿದೆ. ಆದರೆ, ಪ್ರವಾಸ ಕೈಗೊಂಡ ಸ್ಥಳಗಳು ಪ್ರವಾಸಿ ವಾಸಿಸುತ್ತಿರುವ ರಾಜ್ಯದಿಂದ ಹೊರಗಿರಬೇಕು.
'ಪರ್ಯಟನ ಪರ್ವ ಕಾರ್ಯಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ, ವ್ಯಕ್ತಿಯೊಬ್ಬ 2022ರ ವೇಳೆಗೆ ಕನಿಷ್ಠ 15 ಸ್ಥಳಗಳ ಪ್ರವಾಸ ಕೈಗೊಳ್ಳುವುದನ್ನು ಪ್ರೋತ್ಸಾಹಿಸುತ್ತಿದೆ. ಒಂದು ವರ್ಷದಲ್ಲೇ 15 ಸ್ಥಳಗಳನ್ನು ಸುತ್ತಿ ಬರುವ ಗುರಿ ಪೂರೈಸಿದವರಿಗೆ ಪ್ರವಾಸೋದ್ಯಮ ಸಚಿವಾಲಯ ಉತ್ತೇಜಿಸುವ ನಿಟ್ಟಿನಲ್ಲಿಬಹುಮಾನನೀಡಲು ನಿರ್ಧರಿಸಿದೆ' ಎಂದು ಸಚಿವಪ್ರಹ್ಲಾದ್ ಸಿಂಗ್ ಪಟೇಲ್ ತಿಳಿಸಿದರು.
ಇದು ಹಣಕಾಸು ಸಹಾಯವಲ್ಲ, ಪ್ರವಾಸಿಗರಿಗೆ ಪ್ರೋತ್ಸಾಹಿಸುವುದಾಗಿದೆ. ಭಾರತ ಪ್ರವಾಸೋದ್ಯಮದ ರಾಯಭಾರಿಗಳಾಗಿ ಅಂತಹ ಪ್ರವಾಸಿಗರನ್ನು ಗೌರವಿಸಲಾಗುತ್ತದೆ ಎಂದರು.
ಕೊನಾರ್ಕ್ ಸೂರ್ಯ ದೇವಾಲಯವನ್ನು ಭೇಟಿ ನೀಡಬೇಕಾದ ಅಪ್ರತಿಮ ಸ್ಥಳಗಳ ಪಟ್ಟಿಗೆ ಸೇರಿಸುವುದಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.