ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರದಿಂದ ದೇಶದಾದ್ಯಂತ ಲಾಕ್‌ಡೌನ್ 4 ಆರಂಭ: ರಾಜ್ಯಗಳಿಗೆ ಹೆಚ್ಚು ಅಧಿಕಾರ?

Last Updated 15 ಮೇ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ಸೋಮವಾರದಿಂದ ಆರಂಭವಾಗಲಿರುವ ಲಾಕ್‌ಡೌನ್‌ನ ನಾಲ್ಕನೇ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಸಡಿಲಿಕೆ ಇರಲಿದೆ. ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನು ನಿಗದಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಲಾಕ್‌ಡೌನ್‌ ಅನ್ನು ಹೇಗೆ ಸಡಿಲಿಸಬಹುದು ಎಂಬುದರ ಬಗ್ಗೆ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ನೀಡಿರುವ ಸಲಹೆಯನ್ನು ಆಧರಿಸಿ, ಲಾಕ್‌ಡೌನ್‌ 4ರ ಕ್ರಮಾವಳಿಗಳನ್ನು ರೂಪಿಸಲಾಗುತ್ತದೆ. ರಾಜ್ಯಗಳ ಬೇಡಿಕೆಗಳಿಗೆ ಮನ್ನಣೆ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಲಾಕ್‌ಡೌನ್ ಸಡಿಲಿಕೆ ಬಗ್ಗೆ ರಾಜ್ಯಗಳ ಮುಖ್ಯಮಂತ್ರಿಗಳು ಶುಕ್ರವಾರ ಸಂಜೆಯ ವೇಳೆಗೆ ತಮ್ಮ ಸಲಹೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕೋರಿದ್ದರು. ಬಹುತೇಕ ರಾಜ್ಯಗಳು ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ತಮ್ಮ ಸಲಹೆ ನೀಡಿದ್ದವು.ಲಾಕ್‌ಡೌನ್ ಸಡಿಲಿಸುವ ಬಗೆ, ಈ ಸಂಬಂಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ಜವಾಬ್ದಾರಿ ಏನು ಎಂಬುದರ ಬಗ್ಗೆಆರೋಗ್ಯ ಸಚಿವ ಹರ್ಷವರ್ಧನ್ ನೇತೃತ್ವದಲ್ಲಿ ಸಚಿವರ ಗುಂಪು ಶುಕ್ರವಾರ ಸಭೆ ನಡೆಸಿದೆ.

ಮೇ 18ರ ನಂತರ ಲಾಕ್‌ಡೌನ್‌ ಅನ್ನು ಎಷ್ಟರಮಟ್ಟಿಗೆ ಸಡಿಲಿಸಲಾಗುತ್ತದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ ಈಗಾಗಲೇ ಹಲವು ರಾಜ್ಯಗಳು ಮಾರುಕಟ್ಟೆಗಳು ಕಾರ್ಯನಿರ್ವಹಿಸಲು ಅವಕಾಶ ನೀಡಿವೆ. ಕೆಲವು ರಾಜ್ಯಗಳಲ್ಲಿ ಸಾರ್ವಜನಿಕ ಬಸ್ ಸೇವೆ ಆರಂಭವಾಗಿದೆ. ಹಲವು ಕೈಗಾರಿಕೆಗಳು ಕಾರ್ಯನಿರ್ವಹಿಸಲು ಕೆಲ ರಾಜ್ಯಗಳು ಅವಕಾಶ ನೀಡಿವೆ.

ಸೋಮವಾರದ ಬಳಿಕ, ಕೆಂಪು ವಲಯಗಳಲ್ಲಿ ಕೂಡ ಆಟೊ ರಿಕ್ಷಾ ಓಡಾಟಕ್ಕೆ ಅವಕಾಶ ಸಿಗುವ ನಿರೀಕ್ಷೆ ಇದೆ. ಆದರೆ, ಪ್ರಯಾಣಿಕರ ಸಂಖ್ಯೆಯ ಮೇಲೆ ನಿರ್ಬಂಧ ಇರಬಹುದು. ಕೆಂಪು ವಲಯಗಳಲ್ಲಿ ಕೂಡ ಇ–ಕಾಮರ್ಸ್‌ ಸಂಸ್ಥೆಗಳು ಅಗತ್ಯವಲ್ಲದ ವಸ್ತುಗಳನ್ನು ಪೂರೈಸಲು ಅವಕಾಶ ದೊರೆಯಬಹುದು. ಆದರೆ, ಕಂಟೈನ್‌ಮೆಂಟ್‌ ವಲಯಗಳಲ್ಲಿ ಈ ಸೌಲಭ್ಯ ದೊರೆಯದು.

ರಾಜ್ಯಗಳ ಸಲಹೆ...

- ಕೋವಿಡ್ ಸೋಂಕು ಪೀಡಿತ ಜಿಲ್ಲೆಗಳನ್ನು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಾಗಿ ವರ್ಗೀಕರಿಸುವ ಅಧಿಕಾರ ತಮಗೇ ನೀಡಬೇಕು ಎಂದು ಬಹುತೇಕ ಎಲ್ಲಾ ರಾಜ್ಯ ಸರ್ಕಾರಗಳೂ ಕೇಳಿಕೊಂಡಿವೆ

- ಸುರಕ್ಷಿತ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆ ಆರಂಭಿಸಲು ಅನುಮತಿ ನೀಡುವಂತೆ ಹಲವು ರಾಜ್ಯಗಳು ಕೇಳಿಕೊಂಡಿವೆ

- ಮೇ ಅಂತ್ಯದವರೆಗೆ ರೈಲು ಮತ್ತು ವಿಮಾನ ಸೇವೆಯನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಬಾರದು ಎಂದು ಕರ್ನಾಟಕ ಸರ್ಕಾರ ಹೇಳಿದೆ

- ಪ್ರಯಾಣಿಕರ ರೈಲುಗಳ ಸಂಚಾರವನ್ನು ಆರಂಭಿಸಬಾರದು ಎಂದು ಬಹುತೇಕ ಎಲ್ಲಾ ರಾಜ್ಯಗಳು ಹೇಳಿವೆ. ಛತ್ತೀಸಗಡ, ಜಾರ್ಖಂಡ್ ಮತ್ತು ಒಡಿಶಾ ಸರ್ಕಾರಗಳು ಇದನ್ನು ಬಲವಾಗಿ ಪ್ರತಿಪಾದಿಸಿವೆ

- ದೇಶೀಯ ವಿಮಾನ ಸಂಚಾರಕ್ಕೆ ಕೆಲವು ರಾಜ್ಯಗಳು ಒಲವು ವ್ಯಕ್ತಪಡಿಸಿವೆ. ಆದರೆ ಅಂತರರಾಷ್ಟ್ರೀಯ ವಿಮಾನ ಸಂಚಾರವನ್ನು ಆರಂಭಿಸಬಾರದು ಎಂದು ಎಲ್ಲಾ ರಾಜ್ಯಗಳು ಹೇಳಿವೆ

- ಹೋಟೆಲ್, ಸೆಲೂನ್‌, ರೆಸ್ಟೋರಂಟ್‌, ಕೈಗಾರಿಕೆಗಳನ್ನು ಆರಂಭಿಸಬೇಕು. ನಿರ್ಮಾಣ ಚಟುವಟಿಕೆಗೆ ಅವಕಾಶ ನೀಡಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ

- ಟ್ಯಾಕ್ಸಿ ಮತ್ತು ಕ್ಯಾಬ್ ಸೇವೆಯನ್ನು ಆರಂಭಿಸಬೇಕು ಎಂದು ರಾಜಸ್ಥಾನ ಸರ್ಕಾರ ಹೇಳಿದೆ

- ರಸ್ತೆ ಸಾರಿಗೆ ಬಸ್‌ಗಳು ಮತ್ತು ಪಾಸ್‌ನ ಆಧಾರದ ಮೇಲೆ ಅಂತರರಾಜ್ಯ ವಾಹನಗಳ ಸಂಚಾರ ಆರಂಭಿಸಬೇಕು ಎಂದು ಕೇರಳ ಸರ್ಕಾರ ಹೇಳಿದೆ. ಪಶ್ಚಿಮ ಬಂಗಾಳ ಸರ್ಕಾರವೂ ಇದೇ ಮಾತು ಹೇಳಿದೆ.

- ಮೇ 17ರ ನಂತರವೂ ಕಠಿಣ ಲಾಕ್‌ಡೌನ್ ಮುಂದುವರಿಸಿ ಎಂದು ಬಿಹಾರ ಹೇಳಿದೆ

- ಲಾಕ್‌ಡೌನ್‌ ಹಂತಹಂತವಾಗಿ ಸಡಿಲಗೊಳಿಸಿ. ಆದರೆ ನಮ್ಮಲ್ಲಿ ಬಸ್‌, ಮೆಟ್ರೊ ಸೇವೆಯನ್ನು ಆರಂಭಿಸುವುದಿಲ್ಲ. ನಿರ್ಬಂಧದ ಆಧಾರದ ಮೇಲೆ ಖಾಸಗಿ ವಾಹನ ಓಡಾಟಕ್ಕೆ ಅವಕಾಶ ನೀಡಬಹುದು ಎಂದು ತಮಿಳುನಾಡು ಸರ್ಕಾರ ಹೇಳಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT