ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕಾಯ್ದೆ ಅನ್ವಯ ಆದಾಯ ನಷ್ಟ ಪರಿಹಾರವಾಗಿ ಕೇಂದ್ರ ಸರ್ಕಾರವು ಶುಕ್ರವಾರ ರಾಜ್ಯಕ್ಕೆ ₹4,313.13 ಕೋಟಿ ನೆರವನ್ನು ಬಿಡುಗಡೆ ಮಾಡಿದೆ.
2019ರ ಡಿಸೆಂಬರ್ನಿಂದ 2020ರ ಫೆಬ್ರುವರಿ ಅವಧಿಯಲ್ಲಿ ಕರ್ನಾಟಕ ಎದುರಿಸಿರುವ ಆದಾಯ ನಷ್ಟದ ಪರಿಹಾರ ರೂಪದಲ್ಲಿ ಈ ನೆರವನ್ನು ಒದಗಿಸಲಾಗಿದೆ ಎಂದು ಕೇಂದ್ರದ ಹಣಕಾಸು ಸಚಿವಾಲಯದ ಆದೇಶ ತಿಳಿಸಿದೆ.
2017ರ ಜುಲೈ 1ರಂದು ಜಾರಿಯಾದ ಜಿಎಸ್ಟಿ ಕಾಯ್ದೆಯ ಅನ್ವಯ ಕೇಂದ್ರವು ಐದು ವರ್ಷಗಳ ಕಾಲ ರಾಜ್ಯಗಳಿಗೆ ಈ ನಷ್ಟ ಪರಿಹಾರ ಒದಗಿಸಲಿದೆ. ಕೊರೊನಾ ತಡೆ ನಿಟ್ಟಿನಲ್ಲಿ ಘೋಷಿಸಲಾದ ಲಾಕ್ಡೌನ್ನಿಂದ ಆದಾಯದಲ್ಲಿ ನಷ್ಟ ಅನುಭವಿಸಿರುವ ರಾಜ್ಯ ಸರ್ಕಾರಗಳಿಗೆ ಈ ಪರಿಹಾರ ಬಿಡುಗಡೆ ಮಾಡಿದ್ದರಿಂದ ಅನುಕೂಲವಾಗಲಿದೆ.