ಗುವಾಹಟಿ:ಹಿಂದೂ ವಿವಾಹಿತ ಮಹಿಳೆಯು ಸಾಂಪ್ರದಾಯಿಕವಾಗಿ ಬಂದಿರುವ ಬಳೆ ಮತ್ತು ಸಿಂಧೂರ ಧರಿಸಲು ನಿರಾಕರಿಸಿದರೆ, ಅದು ಮದುವೆಗೇಸ ಅಸಮ್ಮತಿ ತೋರಿದಂತೆ ಎಂದು ಅಭಿಪ್ರಾಯಪಟ್ಟಿರುವ ಗುವಾಹಟಿ ಹೈಕೋರ್ಟ್, ವ್ಯಕ್ತಿಗೆ ವಿಚ್ಛೇದನ ಮಂಜೂರು ಮಾಡಿದೆ.
ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಜಯ್ ಲಂಬಾ ಹಾಗೂ ನ್ಯಾಯಮೂರ್ತಿ ಸೌಮಿತ್ರಾ ಸೈಕಿಯಾ ಅವರಿದ್ದ ವಿಭಾಗೀಯ ಪೀಠವು, ಕೌಟುಂಬಿಕ ನ್ಯಾಯಾಲಯದ ಅದೇಶವನ್ನು ವಜಾಮಾಡಿತು.
ಪತ್ನಿಯು ವ್ಯಕ್ತಿಯ ವಿರುದ್ಧ ಯಾವುದೇ ರೀತಿ ಹಿಂಸೆಯಾಗುವಂತೆ ನಡೆದುಕೊಂಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಕೋರಿದ್ದ ಅರ್ಜಿಯನ್ನು ತಳ್ಳಿಹಾಕಿತ್ತು. ಇದನ್ನು ವ್ಯಕ್ತಿ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು.
ಬಳೆ ಮತ್ತು ಸಿಂಧೂರ ಧರಿಸಲು ನಿರಾಕರಿಸುವುದು, ಅವಿವಾಹಿತೆಯಂತೆ ಬಿಂಬಿಸಿಕೊಳ್ಳಲು ಬಯಸುವುದು ಕೂಡಾ ಮದುವೆಗೆ ಅಸಮ್ಮತಿ ತೋರಿದಂತೆ. ಮಹಿಳೆಯ ಇಂಥ ನಿಲುವು ಆಕೆ ಸಹಬಾಳ್ವೆ ನಡೆಸಲು ಸಿದ್ಧವಿಲ್ಲದಿರುವುದರ ಸೂಚನೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು ಜೂನ್ 19ರಂದು ವಿಚ್ಛೇದನ ಕೋರಿದ್ದ ಅರ್ಜಿ ಪುರಸ್ಕರಿಸಿಆದೇಶ ನೀಡಿತು.
ಮಹಿಳೆ ಜೊತೆಗೆ ಅರ್ಜಿದಾರ 2012ರ ಫೆಬ್ರುವರಿ 17ರಂದು ವಿವಾಹವಾಗಿದ್ದರು. ಬಳಿಕ ದಂಪತಿ ನಡುವೆ ಜಗಳ ಆರಂಭವಾಗಿದ್ದು, ಸಹಬಾಳ್ವೆ ನಡೆಸುವುದು ಆಗಿರಲಿಲ್ಲ. ಇದರ ಪರಿಣಾಮ, ಜೂನ್ 30, 2013ರಿಂದಲೂ ಪ್ರತ್ಯೇಕವಾಗಿ ವಾಸವಿದ್ದರು.
ಮಹಿಳೆಯು ಪತಿ ಮತ್ತವರ ಸಂಬಂಧಿಕರ ವಿರುದ್ಧ ಕಿರುಕುಳ ದೂರು ದಾಖಲಿಸಿದ್ದಾರೆ. ಆದರೆ, ಈ ಆರೋಪಗಳು ಸಾಬೀತಾಗಿರಲಿಲ್ಲ ಎಂಬುದನ್ನು ಪೀಠವು ಪರಿಗಣನೆಗೆ ತೆಗೆದುಕೊಂಡಿತು.