ನವದೆಹಲಿ:ಮುಂದಿನ ಎರಡು ತಿಂಗಳು ಕೋವಿಡ್ ಸ್ಥಿತಿಯನ್ನು ಸಮರ್ಥ ಮತ್ತು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯವಿರುವ ವೈದ್ಯಕೀಯ ಮೂಲಸೌಕರ್ಯವನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ದೇಶದಲ್ಲಿನ ಕೊರೊನಾ ಪ್ರಕರಣಗಳ ಪೈಕಿ ಶೇ 70ರಷ್ಟು ವರದಿಯಾಗಿರುವ ಭಾಗಗಳು ವ್ಯಾಪ್ತಿಗೆ ಒಳಪಡುವ 11 ನಗರಪಾಲಿಕೆಗಳ ಆಡಳಿತಗಳಿಗೆ ಈ ಕುರಿತು ಸ್ಪಷ್ಟ ಸಂದೇಶ ರವಾನಿಸಿದೆ.
ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ದೆಹಲಿ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನಗಳಲ್ಲಿ ಈ 11 ನಗರಪಾಲಿಕೆಗಳು ಬರಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ತಮ್ಮ ಭಾಗದಲ್ಲಿ ಬರುವ ಹಳೆಯ ಬಡಾವಣೆಗಳು, ಕೊಳೆಗೇರಿಗಳು ಮತ್ತು ಹೆಚ್ಚು ದಟ್ಟಣೆಯಿರುವ ಪ್ರದೇಶಗಳನ್ನು ಗಂಭೀರವಾಗಿ ಅವಲೋಕಿಸಿ ಕ್ರಮವಹಿಸಬೇಕು. ಅಲ್ಲದೆ, ವಲಸೆ ಕಾರ್ಮಿಕರು ಇರುವ ಶಿಬಿರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ನಿರ್ದೇಶಿಸಲಾಗಿದೆ.
ಆ ನಗರಪಾಲಿಕೆಗಳ ಆಯುಕ್ತರು ಹಾಗೂ ಆಯಾ ರಾಜ್ಯಗಳ ಆರೋಗ್ಯ ಸಚಿವಾಲಯದ ಕಾರ್ಯದರ್ಶಿಗಳ ಜೊತೆಗೆ ವಿಡಿಯೊ ಸಂವಾದ ನಡೆಸಿದ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಪ್ರೀತಿ ಸುಡಾನ್, ‘ಈ ಭಾಗಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ಹೆಚ್ಚು ಒತ್ತು ನೀಡುವುದರ ಜತೆಗೆ ಕೋವಿಡ್ ಪ್ರಕರಣಗಳ ತಪಾಸಣೆಗೆ ಆದ್ಯತೆ ನೀಡಬೇಕು’ ಎಂದು ತಿಳಿಸಿದ್ದಾರೆ.