ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ (ಎಎಪಿ) ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯಿಂದ ಹೊರಗುಳಿದಿರುವ 15 ಮಂದಿ ಶಾಸಕರು ಪಕ್ಷದಲ್ಲೇ ಉಳಿದುಕೊಳ್ಳುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.
ಟಿಕೆಟ್ ವಂಚಿತ ಶಾಸಕರನ್ನು ಇತರ ಪಕ್ಷದವರು ಸೆಳೆಯುವ ಪ್ರಯತ್ನ ಮಾಡಬಹುದೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ‘ಎಲ್ಲಾ ಪಕ್ಷದವರೂ ಪ್ರಯತ್ನಿಸಲಿ. ಆ ಶಾಸಕರು ನಮ್ಮ ಕುಟುಂಬದವರು. ಅವರು ನಮ್ಮೊಂದಿಗಿರುವ ನಂಬಿಕೆ ಇದೆ’ ಎಂದಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅತಿಶಿ, ದಿಲೀಪ್ ಪಾಂಡೆ ಮತ್ತು ರಾಘವ್ ಛದಾ ಸೇರಿದಂತೆ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ 24 ಮಂದಿಗೆ ಪಕ್ಷ ಟಿಕೆಟ್ ನೀಡಿದೆ.
ರಾಜಕೀಯವನ್ನು ಬಜೆಟ್ನಿಂದ ದೂರವಿಡಿ:ರಾಜಕೀಯವನ್ನು ದೂರವಿರಿಸಿ, ರಾಷ್ಟ್ರ ರಾಜಧಾನಿಗೆ ಒಳ್ಳೆಯದಾಗುವ ಬಜೆಟ್ ಮಂಡಿಸುವಂತೆ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಾಲಿನ್ಯ ನಿಯಂತ್ರಣಕ್ಕೆ ಮತ್ತು ಸ್ವಚ್ಛತೆಗಾಗಿ ವಿಶೇಷ ಅನುದಾನ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ.