ನವದೆಹಲಿ: ಸ್ವಚ್ಛತೆಯಲ್ಲಿ ಯಶವಂತ ಪುರ ರೈಲು ನಿಲ್ದಾಣ ರಾಜ್ಯಕ್ಕೆ ಪ್ರಥಮ ಮತ್ತು ಶಿವಮೊಗ್ಗ ಟೌನ್ ರೈಲು ನಿಲ್ದಾಣ ದ್ವಿತೀಯ ಸ್ಥಾನ ಪಡೆದಿವೆ.ರೈಲ್ವೆ ವಲಯ ವಿಭಾಗದ ರಾಷ್ಟ್ರಮಟ್ಟದಲ್ಲಿ ರಾಜ್ಯದ ನೈರುತ್ಯ ವಲಯ 5ನೇ ಸ್ಥಾನ ಪಡೆದಿದೆ.
ಅಖಿಲ ಭಾರತ ಸ್ವಚ್ಛತಾ ಸಮೀಕ್ಷೆಯ ಶ್ರೇಯಾಂಕದಲ್ಲಿ ರಾಜಸ್ಥಾನದ ಜೈಪುರ, ಜೋಧಪುರ ಹಾಗೂ ದುರ್ಗಾಪುರ ರೈಲು ನಿಲ್ದಾಣಗಳು ರಾಷ್ಟ್ರಮಟ್ಟದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿವೆ. ಯಶವಂತಪುರ ನಿಲ್ದಾಣವು 30ನೇ ಸ್ಥಾನ ಗಳಿಸಿದೆ.
ರೈಲು ನಿಲ್ದಾಣಗಳ ಸ್ವಚ್ಛತೆ ಕುರಿತು ಬಾಹ್ಯ ಸಂಸ್ಥೆಯಿಂದ ನಡೆಸಿದ ಸಮೀಕ್ಷೆಯ ವರದಿಯನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ಬುಧವಾರ ಬಿಡುಗಡೆ ಮಾಡಿದರು.
ಸಮೀಕ್ಷೆಯನ್ನು 2019ರಲ್ಲಿ ದೇಶದ 720 ರೈಲು ನಿಲ್ದಾಣಗಳಲ್ಲಿ ನಡೆಸಲಾಗಿದೆ. ಕಳೆದ ವರ್ಷ 6ನೇ ಸ್ಥಾನ ಪಡೆದಿದ್ದ ನೈಋತ್ಯ ವಲಯ ಈ ಬಾರಿ ಒಂದು ಸ್ಥಾನ ಏರಿಕೆಯಾಗಿದೆ. ವಾಯವ್ಯ ವಲಯ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದೆ.
ಅಖಿಲ ಭಾರತ ಮಟ್ಟದಲ್ಲಿ ರಾಜ್ಯದ ವಿವಿಧ ರೈಲು ನಿಲ್ದಾಣಗಳು ಪಡೆದ ಸ್ಥಾನದ ವಿವರ: ಯಶವಂತಪುರ–30, ಶಿವಮೊಗ್ಗ ಟೌನ್– 37, ಮೈಸೂರು–37, ಕೆ.ಆರ್.ಪುರ–48, ಬೆಂಗಳೂರು ಸಿಟಿ–148