ನವದೆಹಲಿ:ಪೌರತ್ವ (ತಿದ್ದುಪಡಿ) ಮಸೂದೆಯನ್ನು ಖಂಡಿಸಿ ಅಸ್ಸಾಂನಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರ ಭಾರತ ಪ್ರವಾಸ ಮುಂದೂಡಿಕೆಯಾಗಿದೆ.
‘ಜಪಾನ್ ಪ್ರಧಾನಿಯವರ ಪ್ರಸ್ತಾವಿತ ಭಾರತ ಪ್ರವಾಸವನ್ನು ಮುಂದೂಡಲಾಗಿದೆ. ಭೇಟಿಯ ಮುಂದಿನ ದಿನಾಂಕವನ್ನುಉಭಯ ರಾಷ್ಟ್ರಗಳ ನಾಯಕರಿಗೆ ಅನುಕೂಲವಾಗುವಂತೆ ನಿರ್ಧರಿಸಲಾಗುವುದು’ ಎಂದುವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಅವರೂ ಭಾರತ ಭೇಟಿಯನ್ನು ರದ್ದುಪಡಿಸಿದ್ದರು.
ಶಿಂಜೊ ಅಬೆ ಅವರು ಡಿಸೆಂಬರ್ 15ರಿಂದ 17ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದು ಮೋದಿ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ರವೀಶ್ ಕುಮಾರ್ ಗುರುವಾರ ಹೇಳಿದ್ದರು. ಆದರೆ, ಮಾತುಕತೆಯ ಸ್ಥಳ ಯಾವುದು ಎಂಬುದನ್ನು ಸರ್ಕಾರ ಘೋಷಿಸಿರಲಿಲ್ಲ. ಆದಾಗ್ಯೂ, ಗುವಾಹಟಿಯಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗಿತ್ತು.
ಗುವಾಹಟಿಯ ಲಾಲುಂಗ್ಗಾಂವ್ನಲ್ಲಿ ಗುರುವಾರ ಕಲ್ಲು ತೂರಾಟ ನಡೆಸಿದ್ದ ಪ್ರತಿಭಟನಕಾರರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದ್ದರು. ಗುಂಡಿನ ದಾಳಿಗೆ ಮೂವರು ಬಲಿಯಾಗಿದ್ದು, ಹಲವು ಮಂದಿ ಗಾಯಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.