ನವದೆಹಲಿ : ‘ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ಶುಲ್ಕ ಏರಿಕೆಗೆ ಸಂಬಂಧಿಸಿದ ಸಮಸ್ಯೆಯು ಈಗ ಇತ್ಯರ್ಥಗೊಂಡಿದೆ. ಪ್ರತಿಭಟನೆ ಮುಂದುವರಿಸುವ ವಿದ್ಯಾರ್ಥಿಗಳ ನಿಲುವು ಸಮರ್ಥನೀಯವಲ್ಲ’ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಪ್ರತಿಪಾದಿಸಿದ್ದಾರೆ.
‘ವಿದ್ಯಾರ್ಥಿಗಳು ಮತ್ತು ಬೋಧಕರು ಸೇರಿದಂತೆ ಹಲವು ಸುತ್ತಿನ ಚರ್ಚೆಯ ಬಳಿಕ ಶುಲ್ಕ ಏರಿಕೆ ವಿಷಯ ಇತ್ಯರ್ಥಗೊಂಡಿದೆ. ಸೇವೆ ಮತ್ತು ಮೂಲಸೌಕರ್ಯ ಬಳಕೆ ಶುಲ್ಕ ಸಂಬಂಧಿತ ಮುಖ್ಯ ಬೇಡಿಕೆಯೂ ಬಗೆಹರಿದಿದೆ’ ಎಂದು ಸಚಿವರು ಹೇಳಿದರು.
‘ಸಹಾನುಭೂತಿಯಿಂದ ವರ್ತಿಸಿ’: ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ಬಲಪ್ರಯೋಗ ಮಾಡಿರುವ ಬಗ್ಗೆ ಸಂಸದೀಯ ಸಮಿತಿಯು ದೆಹಲಿ ಪೊಲೀಸರನ್ನು ಪ್ರಶ್ನಿಸಿದ್ದು, ವಿದ್ಯಾರ್ಥಿಗಳೊಂದಿಗೆ ಸಹಾನುಭೂತಿಯಿಂದ, ಪ್ರಬುದ್ಧವಾಗಿ ವರ್ತಿಸಬೇಕು ಎಂದು ಸೂಚಿಸಿತು ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರ ರಾಜಧಾನಿಯಲ್ಲಿ ಮೇಲಿಂದ ಮೇಲೆ ನಿರ್ಬಂಧಗಳನ್ನು ಹೇರುವುದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿದೆ ಎಂದೂ ಸಮಿತಿ ಹೇಳಿದೆ.
ಆಯಿಷಿ ವಿಚಾರಣೆ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಜನವರಿ 5 ರಂದು ನಡೆದ ಹಿಂಸಾಚಾರ ಕುರಿತು ದೆಹಲಿ ಅಪರಾಧ ದಳದ ಪೊಲೀಸರ ತಂಡವೊಂದು ಸೋಮವಾರ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್ ಅವರನ್ನು ವಿಚಾರಣೆಗೊಳಪಡಿಸಿತು.