ನವದೆಹಲಿ:ಕೇಂದ್ರ ಸರ್ಕಾರ ಹಾಗೂ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಬುಧವಾರ ನೋಟಿಸ್ ನೀಡಿದೆ. ಉತ್ತರಿಸಲು ಮೂರು ವಾರ ಕಾಲಾವಕಾಶ ನೀಡಲಾಗಿದೆ.
ಸಿಬಿಐ ಮಧ್ಯಂತರ ನಿರ್ದೇಶಕರಾಗಿ ಎಂ.ನಾಗೇಶ್ವರರಾವ್ ಅವರ ನೇಮಕದ ಬಗ್ಗೆ ಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ಪ್ರಶಾಂತ್ ಭೂಷಣ್ ಅವರು ಟ್ವಿಟರ್ನಲ್ಲಿ ಟೀಕೆ ಮಾಡಿದ್ದರು.
‘ನ್ಯಾಯಾಂಗದ ಟೀಕೆಯು ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರಲು ದಾರಿ ಮಾಡಿಕೊಡುತ್ತದೆ. ಅಲ್ಲದೆ ಇದು ನ್ಯಾಯದಾನ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡಲು ಕಾರಣವಾಗುತ್ತದೆ’ ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ನವೀನ್ ಸಿಂಗ್ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.
ನ್ಯಾಯಾಂಗ ನಿಂದನೆಯಾಗಬಲ್ಲ ವಿಷಯದ ಕುರಿತು ವಕೀಲರು ಅಥವಾ ವ್ಯಕ್ತಿಯೊಬ್ಬರು ನ್ಯಾಯಾಲಯವನ್ನು ಟೀಕೆ ಮಾಡಬಹುದೇ ಎಂಬ ದೊಡ್ಡ ಪ್ರಶ್ನೆಗೆ ಇದು ಹಾದಿಮಾಡಿಕೊಟ್ಟಿದ್ದು, ಸುದೀರ್ಘ ಚರ್ಚೆ ಅಗತ್ಯವಿದೆ. ನೋಟಿಸ್ ನೀಡಲಾಗಿದ್ದು, ಮಾರ್ಚ್ 7ರಂದು ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಪೀಠ ಹೇಳಿದೆ.
ರಾವ್ ಅವರ ನೇಮಕದಲ್ಲಿ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಅನ್ನು ತಪ್ಪುದಾರಿಗೆ ಎಳೆದಿದೆ ಎಂದು ಭೂಷನ್ ಟ್ವೀಟ್ ಮಾಡಿದ್ದರು. ಹೀಗಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ಗೆ ಮಂಗಳವಾರ ಮನವಿ ಮಾಡಿತ್ತು.