ತಿರುವನಂತಪುರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ವಿಧಾನಸಭೆಗಳಿಗೆ ವಿಶೇಷ ಹಕ್ಕುಗಳಿವೆ ಎಂದು ಬಿಜೆಪಿ ಟೀಕೆಗೆ ಉತ್ತರಿಸಿದ್ದಾರೆ.
ನಿರ್ಣಯ ಅಂಗೀಕರಿಸಿದ್ದನ್ನು ಟೀಕಿಸಿದ್ದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ‘ವಿಜಯನ್ ಅವರು ಸೂಕ್ತ ಕಾನೂನು ಸಲಹೆ ಪಡೆಯಬೇಕು. ಪೌರತ್ವಕ್ಕೆ ಸಂಬಂಧಿಸಿ ಯಾವುದೇ ಕಾನೂನು ಜಾರಿಗೊಳಿಸಲು ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ. ವಿಧಾನಸಭೆಗಳಿಗೆ ಅಲ್ಲ’ ಎಂದು ಹೇಳಿದ್ದರು.
ಬಿಜೆಪಿ ರಾಜ್ಯಸಭಾ ಸದಸ್ಯ ಜಿ.ವಿ.ಎಲ್ ನರಸಿಂಹ ರಾವ್ ಅವರು ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದು, ‘ಸಂಸತ್ತಿನ ಹಕ್ಕುಗಳು ಹಾಗೂ ಕಲಾಪಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕೇರಳ ಮುಖ್ಯಮಂತ್ರಿ ವಿರುದ್ಧ ವಿಚಾರಣೆ ಆರಂಭಿಸಬೇಕು’ ಎಂದು ಕೋರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯನ್, ‘ಇಂತಹ ವಿಚಾರಣೆ ಕುರಿತು ಕೇಳಿರಲಿಲ್ಲ. ಆದರೆ ಇಂತಹ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ ದೇಶದಲ್ಲಿ ಹಿಂದೆಂದೂ ನಡೆಯದಂತಹ ಬೆಳವಣಿಗೆಗಳು ಈಗ ಆಗುತ್ತಿವೆ’ ಎಂದಿದ್ದಾರೆ.
‘ಸಂವಿಧಾನದ ಮೂಲತತ್ವಗಳನ್ನು ಉಲ್ಲಂಘಿಸಿದ ಕಾನೂನಿನ ವಿರುದ್ಧ ನಿರ್ಣಯ ಮಂಡಿಸಿದ ಮೊದಲ ರಾಜ್ಯ ಕೇರಳ’ ಎಂದು ಅವರು ಹೇಳಿದ್ದಾರೆ.