ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಜೆ ತೀರ್ಪು: ಜಾಧವ್‌ಗೆ ಜೀವದಾನ

Last Updated 17 ಜುಲೈ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರನ್ನು 2016ರ ಮಾರ್ಚ್‌ 3ರಂದು ಪಾಕಿಸ್ತಾನವು ಬಂಧಿಸಿತ್ತು. ‘ಇವರು ಅಕ್ರಮವಾಗಿ ದೇಶದೊಳಗೆ ಪ್ರವೇಶಿಸಿದ್ದರು, ಬಲೂಚಿಸ್ತಾನದ– ಅಫ್ಗಾನಿಸ್ತಾನ ಗಡಿ ಪ್ರದೇಶದಿಂದ ಇವರನ್ನು ಸೆರೆ ಹಿಡಿಯಲಾಗಿದೆ’ ಎಂದು ಪಾಕಿಸ್ತಾನ ವಾದಿಸಿತ್ತು. ಆದರೆ, ಕುಲಭೂಷಣ್‌ ಅವರನ್ನು ಪಾಕಿಸ್ತಾನವು ಇರಾನ್‌ನಿಂದ ಅಪಹರಿಸಿತ್ತು ಎಂದು ಭಾರತ ವಾದಿಸಿದೆ.

ಮರಣ ದಂಡನೆ ತೀರ್ಪು: 2017ರ ಏಪ್ರಿಲ್‌ ತಿಂಗಳಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯ ಕುಲಭೂಷಣ್‌ ಅವರಿಗೆ ಮರಣದಂಡನೆ ವಿಧಿಸಿತ್ತು. ‘ಕುಲಭೂಷಣ್‌ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅವರ ಹೇಳಿಕೆಯ ಆಧಾರದಲ್ಲಿಯೇ ಶಿಕ್ಷೆ ನೀಡಲಾಗಿದೆ’ ಎಂದು ಸೇನಾ ನ್ಯಾಯಾಲಯ ಹೇಳಿತ್ತು. ಆದರೆ ಜಾಧವ್‌ ಮೇಲೆ ನ್ಯಾಯಾಲಯ ಹೊರಿಸಿದ್ದ ಆರೋಪಗಳನ್ನು ತಳ್ಳಿ ಹಾಕಿದ್ದ ಭಾರತ, ‘ಜಾಧವ್ ಅವರು ಸೇನೆಯಿಂದ ನಿವೃತ್ತರಾದ ಬಳಿಕ ಇರಾನ್‌ನಲ್ಲಿ ವ್ಯಾಪಾರ ನಡೆಸುತ್ತಿದ್ದರು. ವ್ಯಾಪಾರದ ನಿಮಿತ್ತವಾಗಿ ಅವರು ಅಲ್ಲಿಗೆ ಹೋಗಿದ್ದರು’ ಎಂದು ವಾದಿಸಿತ್ತು.

ತೀರ್ಪಿನ ನಂತರ ಏನಾಯಿತು?: ಭಾರತದ ಒತ್ತಾಯದ ಹೊರತಾಗಿಯೂ ದೂತಾವಾಸದ ಪ್ರತಿನಿಧಿಯ ಭೇಟಿಗೆ ಅವಕಾಶ ನೀಡಲು ಪಾಕಿಸ್ತಾನ ನಿರಾಕರಿ ಸಿತು. ಪರಿಣಾಮ, ಭಾರತವು 2017ರ ಮೇ 8ರಂದು ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆಹೋಯಿತು. ಭಾರತದ ವಾದವನ್ನು ಆಲಿಸಿದ ನ್ಯಾಯಾಲಯ ಜಾಧವ್‌ಗೆ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ತಡೆಹಿಡಿಯುವಂತೆ 2017ರ ಮೇ 18ರಂದು ಪಾಕಿಸ್ತಾನಕ್ಕೆ ಸೂಚಿಸಿತು.

ಜಾಧವ್‌ ಪರವಾಗಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಿದ ವಕೀಲ ಹರೀಶ್‌ ಸಾಳ್ವೆ, ‘ಪಾಕಿಸ್ತಾನವು ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ’ ಎಂದು ಪ್ರತಿಪಾದಿಸಿದರಲ್ಲದೆ, ಪಾಕಿಸ್ತಾನದ ಸೇನಾ ನ್ಯಾಯಾಲಯದ ಕಾರ್ಯವೈಖರಿಯನ್ನೂ ಪ್ರಶ್ನಿಸಿದರು.

ಭಾರತದ ವಾದವನ್ನು ನಿರಾಕರಿಸಿದ ಪಾಕಿಸ್ತಾನವು, ‘ಜಾಧವ್‌ ಗೂಢಚಾರ ಎಂಬುದನ್ನು ಸಾಬೀತುಪಡಿಸಲು ಸೇನೆಯ ಬಳಿ ಸಾಕಷ್ಟು ಪುರಾವೆಗಳಿವೆ’ ಎಂದಿತು. ಪಾಕಿಸ್ತಾನದ ಸೇನಾ ನ್ಯಾಯಾಲಯದ ನ್ಯಾಯಾಧೀಶರಿಗೆ ಕಾನೂನಿನ ತಿಳಿವಳಿಕೆ ಇರುವುದಿಲ್ಲ ಎಂಬ ಭಾರತದ ವಾದವನ್ನು ಪಾಕಿಸ್ತಾನ ವಿರೋಧಿಸಿತು.

ಎರಡನೇ ಮುಖಾಮುಖಿ

ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ– ಪಾಕಿಸ್ತಾನದ ಎದುರುಬದುರಾಗಿರುವುದು ಇದು ಎರಡನೇ ಬಾರಿ. ಹಿಂದೆ 1999ರಲ್ಲಿ ಭಾರತವು ಪಾಕಿಸ್ತಾನದ ವಿಮಾನವೊಂದನ್ನು ಹೊಡೆದುರುಳಿಸಿದ ಪ್ರಕರಣವು ಅಂತರರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತ್ತು.

1999ರ ಆಗಸ್ಟ್‌ 10ರಂದು ಪಾಕಿಸ್ತಾನದ ಕಡಲತೀರ ನಿಗಾ ವಿಮಾನವು ಭಾರತದ ಗಡಿಪ್ರದೇಶದೊಳಗೆ ಬಂದಿತ್ತು. ಕೂಡಲೇ ಆಗಸಕ್ಕೆ ನೆಗೆದ ಭಾರತದ ಎರಡು ಮಿಗ್‌–21 ವಿಮಾನಗಳು ಪಾಕ್‌ ವಿಮಾನಕ್ಕೆ ದಿಗ್ಬಂಧನ ಹಾಕಿ, ಗುಜರಾತ್‌ನ ನಲಿಯಾ ವಿಮಾನ ನಿಲ್ದಾಣದಲ್ಲಿ ಇಳಿಯುವಂತೆ ಸೂಚಿಸಿದವು.

ಭಾರತದ ಎಚ್ಚರಿಕೆಯನ್ನು ಕಡೆಗಣಿಸಿದ ಪಾಕ್‌ ವಿಮಾನವನ್ನು ಭಾರತದ ಕ್ಷಿಪಣಿಯು ಹೊಡೆದುರುಳಿಸಿತು. ಇದನ್ನು ಪ್ರಶ್ನಿಸಿ ಪಾಕಿಸ್ತಾನವು ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆಹೋಗಿತ್ತು. ಅಂತರರಾಷ್ಟ್ರೀಯ ನ್ಯಾಯಾಲಯವು, ‘ಈ ವಿಚಾರವಾಗಿ ತೀರ್ಪು ನೀಡುವುದು ತನ್ನ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದಿತು. ಆ ಮೂಲಕ ಪಾಕಿಸ್ತಾನಕ್ಕೆ ಭಾರಿ ಹಿನ್ನಡೆಯಾಗಿತ್ತು.

ಸುಷ್ಮಾ ಹರ್ಷ

ತೀರ್ಪಿನ ಬಗ್ಗೆ ಸಂಸತ ವ್ಯಕ್ತಪಡಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಮಾಜಿ ಸಚಿವೆ ಸುಷ್ಮಾ ಸ್ವರಾಜ್‌, ‘ಈ ತೀರ್ಪು ಜಾಧವ್‌ ಅವರ ಕುಟುಂಬದವರಿಗೆ ಸಾಂತ್ವನವನ್ನು ನೀಡುವಂಥದ್ದು. ಪ್ರಕರಣವನ್ನು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಒಯ್ಯುವ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಪರಿಣಾಮಕಾರಿಯಾಗಿ ಮತ್ತು ಯಶಸ್ವಿಯಾಗಿ ವಾದ ಮಂಡಿಸಿದ ವಕೀಲ ಹರೀಶ್‌ ಸಾಳ್ವೆ ಅವರಿಗೆ ವಂದನೆಗಳನ್ನು ಸಲ್ಲಿಸಲು ಇಚ್ಛಿಸುತ್ತೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಹುಟ್ಟೂರಲ್ಲಿ ಸಂತಸದ ಅಲೆ

ಸತಾರಾ (ಪಿಟಿಐ): ಕುಲಭೂಷಣ್‌ ಜಾಧವ್‌ ಬಗ್ಗೆಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪುಹೊರಬರುತ್ತಿದ್ದಂತೆ ಜಾಧವ್‌ ಅವರ ಊರು, ಮಹಾರಾಷ್ಟ್ರದ ಸತಾರಾದಲ್ಲಿ ಸಂತಸದ ಅಲೆ ಎದ್ದಿದೆ.

‘ಗ್ರಾಮದ ಜವಳಿ ಎಂಬಲ್ಲಿ ಜಾಧವ್‌ ಅವರು ಮನೆ ಕಟ್ಟಿದ್ದು, ವರ್ಷದಲ್ಲಿ ಒಂದೆರಡು ಬಾರಿಯಾದರೂ ಬಂದು ಹೋಗುತ್ತಿದ್ದರು’ ಎಂದು ಸ್ಥಳೀಯರು ಹೇಳಿದರು. ‘ಜಾಧವ್‌ ಅವರ ಬಿಡುಗಡೆಗೆ ಭಾರತವು ಪಾಕಿಸ್ತಾನದ ಮೇಲೆ ಒತ್ತಡ ಹೇರಬೇಕು’ ಎಂದು ಗ್ರಾಮಸ್ಥರೊಬ್ಬರು ಒತ್ತಾಯಿಸಿದರು.

‘ತೀರ್ಪು ನಮ್ಮ ಪರವಾಗಿರುವುದು ಸಮಾಧಾನ ತಂದಿದೆ. ಈಗ ಅವರು ಮರಳಿ ಭಾರತಕ್ಕೆ ಬರುವುದನ್ನು ನಾವು ಕಾಯುತ್ತಿದ್ದೇವೆ’ ಎಂದು ಜಾಧವ್‌ ಅವರ ಮಾವ, ನಿವೃತ್ತ ಎಸಿಪಿ ಹೇಳಿದರು.

***

ಸತ್ಯ, ನ್ಯಾಯಕ್ಕೆ ಜಯವಾಗಿದೆ. ಜಾಧವ್‌ಗೆ ನ್ಯಾಯ ಸಿಗಲಿದೆ. ಭಾರತದ ನಾಗರಿಕರ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಸದಾ ಕೆಲಸ ಮಾಡುವೆ

–ನರೇಂದ್ರ ಮೋದಿ,‍ ಪ್ರಧಾನಿ

ಭಾರತಕ್ಕೆ ಸಂದಿರುವ ಜಯ. ನ್ಯಾಯಾಲಯದ ತೀರ್ಪನ್ನು ತುಂಬುಹೃದಯದಿಂದ ಸ್ವಾಗತಿಸುತ್ತೇನೆ. ಯಶಸ್ವಿಯಾಗಿ ವಾದ ಮಂಡಿಸಿದ ವಕೀಲ ಹರೀಶ್‌ ಸಾಳ್ವೆ ಅವರಿಗೆ ವಂದನೆ
–ಸುಷ್ಮಾ ಸ್ವರಾಜ್‌, ವಿದೇಶಾಂಗ ವ್ಯವಹಾರಗಳ ಮಾಜಿ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT