ನವದೆಹಲಿ:ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಎರಡು ಮೂರು ದಿನಗಳ ಹಿಂದೆಯೇ ಅಡ್ವಾಣಿ ಹೇಳಿದ್ದರು. ಈ ವಿಷಯವನ್ನು ಅವರು ಪಕ್ಷಕ್ಕೆ ತಿಳಿಸಿದ ನಂತರ, ಯಾರನ್ನು ಕಣಕ್ಕಿಳಿಸಬೇಕು ಎಂಬುದು ಪಕ್ಷದ ನಿರ್ಧಾರವಾಗಿರುತ್ತದೆ ಎಂದು ಅಡ್ವಾಣಿಯವರ ಆಪ್ತರೊಬ್ಬರು ಹೇಳಿರುವುದಾಗಿಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ 184 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಗುರುವಾರ ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ 75 ವರ್ಷಕ್ಕಿಂತ ಹಿರಿಯ ನಾಯಕರನ್ನು ಬಿಜೆಪಿ ಕೈಬಿಟ್ಟಿತ್ತು.
ಗುಜರಾತ್ನ ಗಾಂಧೀನಗರ ಲೋಕಸಭಾ ಕ್ಷೇತ್ರದಲ್ಲಿ ಅಡ್ವಾಣಿ ಸ್ಪರ್ಧೆಗಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಅಭ್ಯರ್ಥಿ ಪಟ್ಟಿ ಬಿಡುಗಡೆಯಾದಾಗ ಪ್ರಸ್ತುತ ಕ್ಷೇತ್ರದಲ್ಲಿ ಅಮಿತ್ ಶಾ ಅವರನ್ನು ಪಕ್ಷ ಕಣಕ್ಕಿಳಿಸಲು ತೀರ್ಮಾನಿಸಿದೆ.
ಆದಾಗ್ಯೂ, ಚುನಾವಣೆಯಲ್ಲಿ ಸ್ಪರ್ಧಿಸಲು ಅಡ್ವಾಣಿ ನಿರಾಕರಿಸಿದ್ದು, ಬಿಜೆಪಿಯಿಂದ ನಿವೃತ್ತಿ ಪಡೆಯುವ ಸೂಚನೆ ಆಗಿರಬಹುದು ಎಂದು ಹೇಳಿದ ಅಡ್ವಾಣಿ ಆಪ್ತ, ರಾಜ್ಯಸಭೆಗೂ ಅಡ್ವಾಣಿಯವರನ್ನು ಕಳುಹಿಸುವ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದಿದ್ದಾರೆ.