ನವದೆಹಲಿ:ಪೌರತ್ವ (ತಿದ್ದುಪಡಿ) ಮಸೂದೆ ಮೂಲಕ ಅಸ್ಸಾಂ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಅಸ್ಸಾಂನ ಗೋಲಾಘಾಟ್ನಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಅಸ್ಸಾಂನ ಮೇಲೆಆರ್ಎಸ್ಎಸ್ ದಾಳಿ ನಡೆಸುತ್ತಿದೆ. ನಿಮ್ಮ ಭಾಷೆ, ಸಂಸ್ಕೃತಿ ಮತ್ತು ನಿಮ್ಮ ಇತಿಹಾಸ ಆರ್ಎಸ್ಎಸ್ನಿಂದ ದಾಳಿಗೆ ಒಳಗಾಗುತ್ತಿದೆ.ಪೌರತ್ವ (ತಿದ್ದುಪಡಿ) ಮಸೂದೆಗೆ ಅನುಮೋದನೆ ಪಡೆಯಲು ನಾವು ಬಿಡುವುದಿಲ್ಲ’ ಎಂದು ರಾಹುಲ್ ಹೇಳಿದ್ದಾರೆ.
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಈಶಾನ್ಯ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಲು ಶಿಫಾರಸು ಮಾಡಿತ್ತು. ಯುಪಿಎ ಕೈಗೊಂಡಿದ್ದ ಎಲ್ಲ ಕ್ರಮಗಳನ್ನೂ ಮೋದಿ, ಬಿಜೆಪಿ ನೇತೃತ್ವದ ಸರ್ಕಾರ ತೆರವುಗೊಳಿಸಿದೆ ಎಂದು ಅವರು ದೂರಿದ್ದಾರೆ.
‘ನಮ್ಮ ನೀತಿಯಿಂದಾಗಿಈಶಾನ್ಯ ರಾಜ್ಯಗಳು ಉತ್ಪಾದನಾ ಹಬ್ ಆಗಬಹುದು ಹಾಗೂ ಈ ರಾಜ್ಯಗಳಲ್ಲಿ ಉನ್ನತ ತಂತ್ರಜ್ಞಾನ ಕಂಪನಿಗಳು ಆರಂಭವಾಗಬಹುದು ಎಂದು ನಾವು ಭಾವಿಸಿದ್ದೆವು. ಆದರೆ, ನರೇಂದ್ರ ಮೋದಿಯವರು ಆ ನೀತಿಯನ್ನೇ ಬದಿಗೆ ಸರಿಸಿದ್ದಲ್ಲದೆ ಯೋಜನಾ ಆಯೋಗವನ್ನೇ ವಿಸರ್ಜಿಸಿದರು’ ಎಂದು ರಾಹುಲ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈಶಾನ್ಯ ರಾಜ್ಯಗಳಿಗಾಗಿ ಕೈಗಾರಿಕಾ ನೀತಿ ರೂಪಿಸಲಿದೆ. ಹೊಸ ಯೋಜನಾ ಆಯೋಗವನ್ನೂ ರಚಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.