ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿವಸೇನಾಗೆ ಸಿ.ಎಂ ಹುದ್ದೆ ಇಲ್ಲ’

‘ಐದೂ ವರ್ಷ ನಾನೇ ಮುಖ್ಯಮಂತ್ರಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿಕೆ
Last Updated 29 ಅಕ್ಟೋಬರ್ 2019, 19:08 IST
ಅಕ್ಷರ ಗಾತ್ರ

ಮುಂಬೈ:ಮಹಾರಾಷ್ಟ್ರ ಸರ್ಕಾರ ರಚನೆ ಪ್ರಕ್ರಿಯೆ ದಿನೇದಿನೇ ಹೊಸತಿರುವು ಪಡೆಯುತ್ತಿದೆ. ‘ಶಿವಸೇನಾಗೆ ಎರಡೂವರೆ ವರ್ಷ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಲಾಗುತ್ತದೆ ಎಂಬ ಭರವಸೆ ನೀಡಿರಲೇ ಇಲ್ಲ. ಹೊಸ ಸರ್ಕಾರದಲ್ಲಿ ಐದೂ ವರ್ಷ ನಾನೇ ಮುಖ್ಯಮಂತ್ರಿಯಾಗಿ ಇರುತ್ತೇನೆ’ ಎಂದು ಸಿ.ಎಂ ದೇವೇಂದ್ರ ಫಡಣವೀಸ್ ಮಂಗಳವಾರ ಹೇಳಿದ್ದಾರೆ.

ಮುಖ್ಯಮಂತ್ರಿ ಹುದ್ದೆಯನ್ನು ಬಿಜೆಪಿ–ಶಿವಸೇನಾಗಳು ತಲಾ ಎರಡೂವರೆ ವರ್ಷ ಹಂಚಿಕೊಳ್ಳಬೇಕು ಎಂಬ ಶಿವಸೇನಾ ಆಗ್ರಹವನ್ನು ಫಡಣವೀಸ್ ಈ ಮೂಲಕ ತಿರಸ್ಕರಿಸಿದ್ದಾರೆ.ಫಡಣವೀಸ್ ಹೇಳಿಕೆಗೆ ಶಿವಸೇನಾ ಸಹ ಖಾರವಾಗೇ ಪ್ರತಿಕ್ರಿಯಿಸಿದೆ. ಇದು ಎರಡೂ ಪಕ್ಷಗಳ ನಾಯಕರ ನಡುವಣ ಜಟಾಪಟಿಗೆ ಕಾರಣವಾಗಿದೆ.

ಮಂಗಳವಾರ ಸಂಜೆ ಬಿಜೆಪಿ ನಾಯಕರ ಜತೆ ನಡೆಯಬೇಕಿದ್ದ ಸಭೆಯನ್ನು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ರದ್ದುಪಡಿಸಿದ್ದಾರೆ.

ನಾನೂ ಮುಖ್ಯಮಂತ್ರಿ ಆಗಬಹುದು: ‘ನಾನೇ ಮುಖ್ಯಮಂತ್ರಿ ಎಂದು ಎಲ್ಲರೂ ಹೇಳಬಹುದು. ಬಿಜೆಪಿಯ ಏಕಾಂತ್‌ ಖಾಡ್ಸೆ ಆಗಲೀ, ಎನ್‌ಸಿಪಿಯ ಶರದ್ ಪವಾರ್ ಆಗಲೀ, ಪ್ರಕಾಶ್ ಅಂಬೇಡ್ಕರ್ ಆಗಲೀ ಅಥವಾ ನಾನೇ ಆಗಲಿ, 145 ಸಂಖ್ಯೆಯ ಬಹುಮತ ತೋರಿಸಿದರೆ ಸಿ.ಎಂ ಆಗಬಹುದು’ ಎಂದು ಶಿವಸೇನಾ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.

ಎನ್‌ಸಿಪಿ, ಕಾಂಗ್ರೆಸ್‌ ಜತೆ ಮೈತ್ರಿ ಸಾಧ್ಯತೆ ಕಷ್ಟ:ಅಧಿಕಾರ ಹಂಚಿಕೆ ವಿಚಾರದಲ್ಲಿ ಬಿಜೆಪಿಯ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಬೇರೆ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವ ಯಾವ ಆಯ್ಕೆಯೂ ಬಿಜೆಪಿ–ಶಿವಸೇನಾ ಮುಂದೆ ಇಲ್ಲ. ನಾವೇ ಸರ್ಕಾರ ರಚಿಸುತ್ತೇವೆ. ಐದು ವರ್ಷ ಸುಸ್ಥಿರ ಆಡಳಿತ ನಡೆಸುತ್ತೇವೆ ಎಂದು ದೇವೇಂದ್ರ ಫಡಣವೀಸ್ ಹೇಳಿದ್ದಾರೆ.‌

ಆದರೆ, ಶಿವಸೇನಾ ಸರ್ಕಾರ ರಚಿಸುವುದಾದರೆ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಬೆಂಬಲ ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ‘ಈ ಸಂಬಂಧ ಶಿವಸೇನಾ ನಮ್ಮನ್ನು ಸಂಪರ್ಕಿಸಿದ ನಂತರ ಬೆಂಬಲ ನೀಡುವ ಬಗ್ಗೆ ಯೋಚಿಸಲಾಗುತ್ತದೆ’ ಎಂದು ರಾಜ್ಯ ಕಾಂಗ್ರೆಸ್‌ ಘಟಕ ಈ ಹಿಂದೆಯೇ ಸ್ಪಷ್ಟಪಡಿಸಿದೆ.

ಆದರೆ,ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಈ ಸಾಧ್ಯತೆಯನ್ನು ಈ ಹಿಂದೆಯೇ ತಳ್ಳಿಹಾಕಿದ್ದಾರೆ.

ಸರ್ಕಾರ ರಚನೆಯ ಬಿಕ್ಕಟ್ಟು:ಮುಖ್ಯಮಂತ್ರಿ ಹುದ್ದೆಯನ್ನು ಎರಡೂವರೆ ವರ್ಷಗಳ ಕಾಲ ತಮಗೆ ಬಿಟ್ಟುಕೊಡಬೇಕು. ಈ ಸಂಬಂಧ ಬಿಜೆಪಿಯು ಲಿಖಿತ ರೂಪದಲ್ಲಿ ಭರವಸೆ ನೀಡಬೇಕು. ಈ ಪ್ರಕ್ರಿಯೆ ಮುಗಿಯುವವರೆಗೂ ಸರ್ಕಾರ ರಚನೆ ಸಂಬಂಧ ರಾಜ್ಯಪಾಲರ ಬಳಿ ಹಕ್ಕು ಮಂಡಿಸಬಾರದು ಎಂದು ಶಿವಸೇನಾ ನಾಯಕರು ಪಟ್ಟು ಹಿಡಿದಿದ್ದಾರೆ.

ಸಭೆ ರದ್ದಾಗಿರುವ ಮತ್ತು ಶಿವಸೇನಾವು ನಿಲುವು ಸಡಿಲಿಸದ ಕಾರಣ, ಸರ್ಕಾರ ರಚನೆ ಪ್ರಕ್ರಿಯೆ ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

‘ಅಧಿಕಾರವನ್ನು 50:50 ಅನುಪಾತದಲ್ಲಿ ಹಂಚಿಕೊಳ್ಳಬೇಕು ಎಂದು ಲೋಕಸಭೆ ಚುನಾವಣೆಗೂ ಮುನ್ನ ಮಾತುಕತೆ ನಡೆದಿತ್ತು. ಆನಂತರವೇ ಮೈತ್ರಿ ಮಾಡಿಕೊಳ್ಳಲಾಗಿತ್ತು. ಆ ನಿರ್ಧಾರವನ್ನು ಅನುಷ್ಠಾನಕ್ಕೆ ತರುವ ಸಮಯ ಬಂದಿದೆ’ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ಫಲಿತಾಂಶ ಪ್ರಕಟವಾದ ದಿನ ಹೇಳಿದ್ದರು. ಮುಖ್ಯಮಂತ್ರಿ ಹುದ್ದೆಯನ್ನು ಎರಡೂವರೆ ವರ್ಷಗಳ ಕಾಲ ತಮಗೆ ಬಿಟ್ಟುಕೊಡಬೇಕು. ಈ ಸಂಬಂಧ ಬಿಜೆಪಿಯು ಲಿಖಿತ ರೂಪದಲ್ಲಿ ಭರವಸೆ ನೀಡಬೇಕು. ಈ ಪ್ರಕ್ರಿಯೆ ಮುಗಿಯುವವರೆಗೂ ಸರ್ಕಾರ ರಚನೆ ಸಂಬಂಧ ರಾಜ್ಯಪಾಲರ ಬಳಿ ಹಕ್ಕು ಮಂಡಿಸಬಾರದು ಎಂದು ಶಿವಸೇನಾ ಶಾಸಕರು, ನಾಯಕರು ಪಟ್ಟು ಹಿಡಿದಿದ್ದಾರೆ.

ಚುನಾವಣೆ ಫಲಿತಾಂಶ ಪ್ರಕಟವಾದ ದಿನದಿಂದ ಈವರೆಗೆ ಬಿಜೆಪಿಯ ಯಾವ ನಾಯಕರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಮಂಗಳವಾರ ಫಡಣವೀಸ್ ಅವರು ಶಿವಸೇನಾದ ಈ ಆಗ್ರಹವನ್ನು ತಿರಸ್ಕರಿಸಿದ್ದಾರೆ. ಐದೂ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಅವರು ಹೇಳಿದ್ದಾರೆ.

ಫಡಣವೀಸ್ ಮಾತಿನ ಮುಖ್ಯಾಂಶಗಳು

* ಶಿವಸೇನಾಗೆ ಎರಡೂವರೆ ವರ್ಷ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವ ಬಗ್ಗೆ ಲೋಕಸಭಾ ಚುನಾವಣೆಗೂ ಮುನ್ನ ನಡೆದ ಮಾತುಕತೆಯಲ್ಲಿ ಯಾವುದೇ ಭರವಸೆ ನೀಡಿರಲಿಲ್ಲ ಎಂದು ಅಮಿತ್ ಶಾ ಅವರು ದೃಢಪಡಿಸಿದ್ದಾರೆ

* ನಮ್ಮ ಮೈತ್ರಿಯೇ (ಬಿಜೆಪಿ–ಶಿವಸೇನಾ) ಸರ್ಕಾರ ರಚಿಸಲಿದೆ. ಅರ್ಹತೆಗೆ ತಕ್ಕ ಬೇಡಿಕೆಗಳನ್ನು ಪರಿಗಣಿಸಲಾಗುತ್ತದೆ. ಸರ್ಕಾರ ರಚನೆ ಮಾತುಕತೆ ವೇಳೆ ಇವೆಲ್ಲಾ ನಿರ್ಧಾರವಾಗಲಿವೆ

* ಮುಂದಿನ ಐದು ವರ್ಷ ಬಿಜೆಪಿ ನೇತೃತ್ವದ ಸರ್ಕಾರವೇ ಇರಲಿದೆ. ಅದರಲ್ಲಿ ಯಾರೂ, ಯಾವುದೇ ರೀತಿಯ ಸಂದೇಹಪಡುವ ಅವಶ್ಯಕತೆ ಇಲ್ಲ. ನಮ್ಮ ಮೈತ್ರಿಯು ಸುಸ್ಥಿರ ಸರ್ಕಾರ ನೀಡಲಿದೆ

* ಸರ್ಕಾರ ರಚನೆಯಾದ ನಂತರ 50:50 ಅನುಪಾತದ ಸೂತ್ರ ಅಂದರೆ ಏನು ಎಂಬುದು ಎಲ್ಲರಿಗೂ ತಿಳಿಯಲಿದೆ. ಶಿವಸೇನಾಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಬಗ್ಗೆ ಅಗತ್ಯ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ

* ಮುಂದಿನ ಮುಖ್ಯಮಂತ್ರಿ ನಾನೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಇದನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ

ವಿಡಿಯೊ ಟ್ವೀಟ್‌...

ಲೋಕಸಭೆ ಚುನಾವಣೆಗೂ ಮುನ್ನ ಮಾಧ್ಯಮಗೋಷ್ಠಿ ಒಂದರಲ್ಲಿ ದೇವೇಂದ್ರ ಫಡಣವೀಸ್ ಅವರು ಮಾತನಾಡಿದ್ದ ದೃಶ್ಯವಿರುವ ವಿಡಿಯೊವನ್ನು ಶಿವಸೇನಾ ಟ್ವೀಟ್ ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ–ಶಿವಸೇನಾ ಮೈತ್ರಿ ಮಾಡಿಕೊಂಡಿದ್ದನ್ನು ಘೋಷಿಸುವ ಉದ್ದೇಶದಿಂದ ಆ ಮಾಧ್ಯಮಗೋಷ್ಠಿ ಆಯೋಜಿಸಲಾಗಿತ್ತು.

‘ಮತ್ತೆ ಅಧಿಕಾರಕ್ಕೆ ಬಂದರೆ, ಅಧಿಕಾರ ಮತ್ತು ಜವಾಬ್ದಾರಿಯನ್ನು ಸಮಾನವಾಗಿ ಹಂಚಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ದೇವೇಂದ್ರ ಫಡಣವೀಸ್ ಅವರು ಮರಾಠಿಯಲ್ಲಿ ಹೇಳಿದ್ದಾರೆ.

‘ಕಿವಿಕೊಟ್ಟು ಕೇಳಿ. ನಿಮ್ಮ ಭರವಸೆಯನ್ನು ಸ್ವಲ್ಪ ನೆನಪು ಮಾಡಿಕೊಳ್ಳಿ’ ಎಂದು ಶಿವಸೇನಾದ ನಾಯಕ ಹರ್ಷಲ್ ಪ್ರಧಾನ್ ಅವರು, ಈ ವಿಡಿಯೊ ಜತೆ ಟ್ವೀಟ್ ಮಾಡಿದ್ದಾರೆ.

ಸೇನಾ ಶಾಸಕರು ಬಿಜೆಪಿಗೆ?

‘ಶಿವಸೇನಾದ 45 ಶಾಸಕರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಜತೆಯೇ ಸರ್ಕಾರ ರಚಿಸಬೇಕು. ನೀವು ಏನಾದರೂ ಮಾಡಿಕೊಳ್ಳಿ,ಬಿಜೆಪಿ ಸರ್ಕಾರದ ಜತೆ ನಾವು ಇರಬೇಕು ಅಷ್ಟೆ ಎಂದು ಸೇನಾ ಶಾಸಕರು ಪಟ್ಟು ಹಿಡಿದಿದ್ದಾರೆ’ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸಂಜಯ್ ಕಾಕಡೆ ಹೇಳಿದ್ದಾರೆ.

‘ದೇವೇಂದ್ರ ಫಡಣವೀಸ್ ಅವರೇ ಮುಖ್ಯಮಂತ್ರಿಯಾಗಬೇಕು. ನಮ್ಮನ್ನು ಹೇಗಾದರೂ ಮಾಡಿ, ಸರ್ಕಾರದಲ್ಲಿ ಸೇರಿಸಿಕೊಳ್ಳಿ ಎಂದೂ ಅವರು ಕೇಳಿಕೊಳ್ಳುತ್ತಿದ್ದಾರೆ’ ಎಂದು ಕಾಕಡೆ ಹೇಳಿದ್ದಾರೆ.

ಆದರೆ, ಈ ಶಾಸಕರು ಬಿಜೆಪಿ ಸೇರಲು ಬಯಸಿದ್ದಾರೆಯೇ ಅಥವಾ ಬಿಜೆಪಿ–ಶಿವಸೇನಾ ಮೈತ್ರಿ ಸರ್ಕಾರ ರಚಿಸಲು ಉತ್ಸುಕರಾಗಿದ್ದಾರೆಯೇ ಎಂಬುದನ್ನು ಕಾಕಡೆ ಅವರು ಸ್ಪಷ್ಟಪಡಿಸಿಲ್ಲ.

ಕಾಕಡೆ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ದೇವೇಂದ್ರ ಫಡಣವೀಸ್ ಅವರು, ‘ಸಂಜಯ್ ಕಾಕಡೆ ಅವರು ನನ್ನ ಸಂಪರ್ಕದಲ್ಲಿ ಇಲ್ಲ’ ಎಂದಷ್ಟೇ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT