ಮುಂಬೈ: ಮಹಾರಾಷ್ಟ್ರದ ಸಂಪುಟ ಸಚಿವರೊಬ್ಬರಿಗೆ ಕೋವಿಡ್ ಇರುವುದು ದೃಢಪಟ್ಟಿದೆ ಎಂದು ಶುಕ್ರವಾರ ಮೂಲಗಳು ತಿಳಿಸಿವೆ. ಅವರು ಎನ್ಸಿಪಿಗೆ ಸೇರಿದವರು ಎಂದು ಗೊತ್ತಾಗಿದೆ.
ಮರಾಠವಾಡ ಮೂಲದ ಸಚಿವರಾದ ಅವರು, ಕಳೆದ ವಾರ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರು.
ಅವರಿಗೆ ಕೋವಿಡ್ ಸೋಂಕು ತಗುಲಿರುವುದು ಗುರುವಾರ ತಡರಾತ್ರಿ ಪರೀಕ್ಷಾ ವರದಿಯಿಂದ ಗೊತ್ತಾಗಿದೆ. ಕೂಡಲೇ ಅವರನ್ನು ಮತ್ತು ಅವರೊಂದಿಗೆ ಸಂಪರ್ಕ ಹೊಂದಿದ್ದ ಸಿಬ್ಬಂದಿ ಹಾಗೂ ಸಂಬಂಧಿಕರನ್ನು ಮುಂಬೈನಲ್ಲಿ ಕ್ವಾರಂಟೈನ್ನಲ್ಲಿ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ಸಂಪುಟ ಸಚಿವರಾದ ಅಶೋಕ್ ಚವಾನ್ (ಕಾಂಗ್ರೆಸ್) ಮತ್ತು ಜಿತೇಂದ್ರ ಅವಾದ್ (ಎನ್ಸಿಪಿ) ಅವರಿಗೆ ಈ ಹಿಂದೆ ಕೋವಿಡ್ ದೃಢಪಟ್ಟಿತ್ತು. ಅವರಿಬ್ಬರೂ ಈ ಸೋಂಕಿನಿಂದ ಗುಣಮುಖರಾಗಿದ್ದಾರೆ.