ಭೋಪಾಲ: ವಲಸೆ ಕಾರ್ಮಿಕರ ಕುರಿತುಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಕಮಲನಾಥ್ ಅವರು ನೀಡಿದ್ದ ಹೇಳಿಕೆ ಸಂಬಂಧ ಬಿಹಾರದ ವಿವಿಧ ನ್ಯಾಯಾಲಯಗಳಲ್ಲಿ ದೂರುಗಳು ದಾಖಲಾಗಿವೆ.
ಸಂಸತ್ತಿನಲ್ಲಿಯೂ ಕೆಲವು ಬಿಜೆಪಿ ಸಂಸದರು ಈ ವಿಷಯ ಪ್ರಸ್ತಾಪಿಸಿದ್ದು, ಕಮಲನಾಥ್ ಇತರ ರಾಜ್ಯಗಳ ಜನರ ವಿರುದ್ಧ ದ್ವೇಷ ಬಿತ್ತುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕಮಲನಾಥ್ ಹೇಳಿಕೆಯನ್ನು ಟೀಕಿಸಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ‘ಮಧ್ಯಪ್ರದೇಶದಲ್ಲಿ ಯಾರೂ ಹೊರಗಿನವರಲ್ಲ. ಎಲ್ಲರನ್ನೂ ತಮ್ಮವರೆಂದು ಸ್ವೀಕರಿಸುವುದರಿಂದಾಗಿಯೇ ಭಾರತದ ಹೃದಯ ಎಂದು ರಾಜ್ಯ ಪ್ರಸಿದ್ಧವಾಗಿದೆ’ ಎಂದಿದ್ದಾರೆ.
ಬಂಡವಾಳ ಹೂಡಿಕೆಗೆ ಉತ್ತೇಜಕ ಸೌಲಭ್ಯಗಳನ್ನು ಪಡೆಯುತ್ತಿರುವ ಕೈಗಾರಿಕೆಗಳು ಸ್ಥಳೀಯರಿಗೆ ಶೇ 70ರಷ್ಟು ಉದ್ಯೋಗಗಳನ್ನು ನೀಡಬೇಕೆಂಬ ಹೊಸ ನೀತಿಯನ್ನು ಕಮಲನಾಥ್ ಸೋಮವಾರ ಘೋಷಿಸಿದ್ದರು.
‘ರಾಜ್ಯದಲ್ಲಿ ಸಾಕಷ್ಟು ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆ. ಆದರೆ ಬಿಹಾರ ಮತ್ತು ಉತ್ತರ ಪ್ರದೇಶಗಳಿಂದ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಅವರಿಗೇ ಈ ಕೆಲಸಗಳು ಸಿಗುತ್ತಿವೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗದಂತಾಗಿದೆ. ಗುಜ ರಾತ್ ಸೇರಿದಂತೆ ಹಲವು ರಾಜ್ಯಗಳು ಸ್ಥಳೀಯರಿಗೆ ಉದ್ಯೋಗ ನೀಡುವುದಕ್ಕೆ ಪೂರಕವಾದ ನೀತಿಗಳನ್ನು ಹೊಂದಿವೆ’ ಎಂದು ಕಮಲನಾಥ್ ಈ ಸಂದರ್ಭದಲ್ಲಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.