ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ನನ್ನ ಹಿಂದುತ್ವದ ಸಿದ್ಧಾಂತವು ಬಿಜೆಪಿ ಹಿಂದುತ್ವಕ್ಕಿಂತ ಭಿನ್ನವಾಗಿದೆ ಎಂದು ಹೇಳಿದ್ದಾರೆ.
ಧರ್ಮದ ಹೆಸರೇಳಿಕೊಂಡು ಅಧಿಕಾರವನ್ನು ಹಿಡಿಯುವುದು ನನ್ನ ಹಿಂದುತ್ವದ ಮಾದರಿಯಲ್ಲ. ನಾವಿಬ್ಬರು ಒಂದೇ ಯೋಚನಾ ಪ್ರಕ್ರಿಯೆಯನ್ನು ಹೊಂದಿಲ್ಲ. ಶಾಂತಿಯುತವಾಗಿಲ್ಲದ ಹಿಂದು ರಾಷ್ಟ್ರವು ನನಗೆ ಬೇಕಾಗಿಲ್ಲ. ಧರ್ಮವನ್ನು ಬಳಸಿಕೊಳ್ಳುವುದು ಮತ್ತು ಅಧಿಕಾರ ಹಿಡಿಯುವುದು ನನ್ನ ಹಿಂದುತ್ವವಲ್ಲ ಎಂದು ಹೇಳಿದ್ದಾರೆ.
ಒಬ್ಬರನ್ನು ಮತ್ತೊಬ್ಬರು ಕೊಲ್ಲುವುದು ಮತ್ತು ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸುವುದು ಕೂಡ ನನ್ನ ಹಿಂದೂರಾಷ್ಟ್ರದ ಮಾದರಿಯಲ್ಲ ಎಂದು ಕಿಡಿಕಾರಿದ್ದಾರೆ.
ಇದಕ್ಕೂ ಮುನ್ನ ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯು ಜನರನ್ನು ಪೌರತ್ವ ಹಕ್ಕಿನಿಂದ ವಂಚಿತರನ್ನಾಗಿಸುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.
ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯು ನಾಗರಿಕತ್ವದಿಂದ ಜನರನ್ನು ದೂರ ಕರೆದೊಯ್ಯುವುದಲ್ಲ. ಬದಲಿಗೆ ನೆರೆಯ ರಾಷ್ಟ್ರಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದಾಗಿದೆ ಎಂದು ಹೇಳಿದ್ದರು.