ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು, ಹಿಂಸಾಚಾರ ಪೀಡಿತ ಈಶಾನ್ಯ ದೆಹಲಿಯ ಸ್ಥಿತಿ ಕುರಿತು ಚರ್ಚಿಸಿದರು.
ಆಮ್ ಅದ್ಮಿ ಪಕ್ಷ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೆ ಮರಳಿದ ನಂತರ ಉಭಯ ನಾಯಕರ ನಡುವಣ ಮೊದಲ ಭೇಟಿ ಇದು. ಸಂಸತ್ತಿನ ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಸುಮಾರು ಒಂದು ತಾಸು ಸಭೆ ನಡೆಯಿತು.
ಬಳಿಕ ಮಾತನಾಡಿದ ಕೇಜ್ರಿವಾಲ್ ಅವರು, ‘ಪೊಲೀಸರು ಕಳೆದ ಕೆಲವು ದಿನಗಳಿಂದ ಇರುವಂತೆ, ಈ ಮೊದಲೇ ಜಾಗೃತರಾಗಿದ್ದಿದ್ದರೆ ಹಿಂಸಾಚಾರವನ್ನು ತಡೆಗಟ್ಟಬಹುದಿತ್ತು’ ಎಂದು ಪ್ರತಿಕ್ರಿಯಿಸಿದರು.
‘ಈಗ ವದಂತಿ ಹಿಂದೆಯೇ ಪೊಲೀಸರು ಜಾಗೃತರಾಗುತ್ತಿರುವುದು ಶ್ಲಾಘನೀಯ’ ಎಂದರು.
‘ಇಂಥ ಘಟನೆಗಳು ಮರುಕಳಿಸಬಾರದು ಎಂದು ಪ್ರಧಾನಿ ಕೂಡಾ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ದೆಹಲಿ ಅಭಿವೃದ್ಧಿಗೆ ಅವರ ಸಹಕಾರ ಕೋರಿದ್ದೇನೆ’ ಎಂದರು.
ಫೆಬ್ರುವರಿ 25ರಂದು ಗೃಹ ಸಚಿವ ಅಮಿತ್ ಶಾ ಅವರು ಕೇಜ್ರಿವಾಲ್ ಮತ್ತು ವಿವಿಧ ಮುಖಂಡರ ಜೊತೆಗೆ ಚರ್ಚಿಸಿದ್ದರು.