'ಕೊರೊನಾ ಪಿಡುಗಿನ ವಿರುದ್ಧ ನಾವು ಒಂದು ದೇಶವಾಗಿ ಹೇಗೆ ಹೋರಾಡಿದೆವು ಎನ್ನುವುದನ್ನು ಮುಂದಿನ ತಲೆಮಾರು ಪರಾಮರ್ಶಿಸಲಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆಗೆ ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ಆರಂಭಿಸಿದ ಮೋದಿ,'ನಮ್ಮ ಕಾರ್ಯವೈಖರಿಯು ಸಹಕಾರದ ಒಕ್ಕೂಟ ವ್ಯವಸ್ಥೆಗೆ ಒಂದು ಮಾದರಿಯಾಗಿ ಉಳಿಯಲಿದೆ. ಮುಂದಿನ ತಲೆಮಾರು ಸಹ ಅದೇ ರೀತಿ ನೆನಪಿಸಿಕೊಳ್ಳಲಿದೆ' ಎಂದು ಆಶಯ ವ್ಯಕ್ತಪಡಿಸಿದರು.
ಕೊರೊನಾ ವೈರಸ್ ಪಿಡುಗಿಗೆ ಬಲಿಯಾದವರ ಬಗ್ಗೆ ಕಾನ್ಫ್ರೆನ್ಸ್ನ ಆರಂಭದಲ್ಲಿಯೇ ಸಂತಾಪ ವ್ಯಕ್ತಪಡಿಸಿದರು.
'ದೇಶವನ್ನು ಅಲ್ಲಾಕ್ ಮಾಡುವ ಮೊದಲ ಪ್ರಯತ್ನಕ್ಕೆ ಎರಡು ವಾರ ಆಗಿದೆ. ಈ ಅವಧಿಯಲ್ಲಿ ನಮಗೆ ಆದ ಅನುಭವಗಳು ಮುಂದಿನ ದಿನಕ್ಕೆ ಮಾರ್ಗದರ್ಶಿ ಆಗಬಲ್ಲದು. ನೀವು ನೀಡುವ ವಾಸ್ತವ ಚಿತ್ರಣ ಮತ್ತು ಸಲಹೆಗಳನ್ನು ಆಧರಿಸಿ ಮುಂದಿನ ಕಾರ್ಯತಂತ್ರ ರೂಪಿಸಲಾಗುವುದು' ಎಂದು ಮೋದಿ ಹೇಳಿದರು.
'ಕೊರೊನಾ ವೈರಸ್ ಪಿಡುಗಿನಿಂದ ಸತ್ತವರ ಸಂಖ್ಯೆ ನಮ್ಮ ದೇಶದಲ್ಲಿ ಗಮನಾರ್ಹ ಪ್ರಮಾಣದಲ್ಲಿಲ್ಲ. ಚೇತರಿಕೆ ಪ್ರಮಾಣವೂ ಶೇ 50ಕ್ಕಿಂತ ಹೆಚ್ಚು ಇದೆ' ಎಂದು ಮಾಹಿತಿ ನೀಡಿದರು.
'ಕೊರೊನಾ ಪಿಡುಗು ತಡೆಯಲು ಜನರು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದನ್ನು ಮುಂದುವರಿಸಬೇಕು. ಮಾಸ್ಕ್ ಇಲ್ಲದೆ ಮನೆಯಿಂದ ಹೊರಗೆ ಹೋಗುವುದನ್ನು ಯೋಚಿಸುವುದೂ ಸಲ್ಲದು. ಕೈಗಳನ್ನು ಆಗಿಂದಾಗ್ಗೆ ತೊಳೆದುಕೊಳ್ಳುವುದು ಮುಖ್ಯ' ಎಂದು ಕಿವಿಮಾತು ಹೇಳಿದರು.
'ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭವಾಗಿವೆ. ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಾಗಿದೆ. ರಫ್ತು ಪ್ರಮಾಣವೂ ಸಹಜ ಸ್ಥಿತಿಗೆ ಮರಳುತ್ತಿದೆ. ಪರಿಸ್ಥಿತಿ ಸುಧಾರಿಸುತ್ತಿರುವುದನ್ನು ಇದು ಸೂಚಿಸುತ್ತದೆ' ಎಂದು ಮೋದಿ ಅಭಿಪ್ರಾಯಪಟ್ಟರು.
ನಾಳೆ (ಜೂನ್ 17) ಕೊರೊನಾ ಪಿಡುಗಿನಿಂದ ಅತಿಹೆಚ್ಚು ಹಾನಿ ಅನುಭವಿಸಿರುವ ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು, ಗುಜರಾತ್ ಸೇರಿದತೆ ಇತರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.