ಲಖನೌ: ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾದಿಯೊಬ್ಬರು ನವಜಾತ ಶಿಶುವಿನ ಹೆಚ್ಚುವರಿ ಎರಡು ಬೆರಳುಗಳನ್ನು ಕತ್ತರಿಸಿದ ಪರಿಣಾಮ ಮಗು ಮೃತಪಟ್ಟಿದೆ ಎಂದು ಆರೋಪಿಸಲಾಗಿದೆ.
ಬೆರಳು ಕತ್ತರಿಸಿದ ಜಾಗಕ್ಕೆ ಬ್ಯಾಂಡೇಜ್ ಮಾಡಿದ ದಾದಿ, ಮನೆಗೆ ತೆರಳಲು ಮಗುವಿನ ತಾಯಿಗೆ ಅನುಮತಿ ನೀಡಿದ್ದಾರೆ. ಆದರೆ ಆಸ್ಪತ್ರೆಯಿಂದ ತೆರಳುವ ಮೊದಲೇ ಮಗು ರಕ್ತಸ್ರಾವದಿಂದ ಮೃತಪಟ್ಟಿದೆಎಂದು ಮೂಲಗಳು ತಿಳಿಸಿವೆ.
ಕಹಾರ್ಕಾ ಗ್ರಾಮದ ಲಕ್ಷ್ಮಿ ದೇವಿ ಎಂಬುವವರು ಭಾನುವಾರ ಈ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ಕೈಗಳಲ್ಲಿ ಎರಡು ಹೆಚ್ಚುವರಿ ಬೆರಳುಗಳಿದ್ದವು.
ವೈದ್ಯರೊಂದಿಗೆ ಸಮಾಲೋಚಿಸದೆ ದಾದಿ ಈ ಬೆರಳುಗಳನ್ನು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ.
‘ಬೆರಳುಗಳನ್ನು ಕತ್ತರಿಸುವ ವಿಚಾರವನ್ನು ನಮಗೆ ತಿಳಿಸಿರಲಿಲ್ಲ‘ ಎಂದು ಲಕ್ಷ್ಮಿ ಅವರ ಪತಿ ದೂರಿದ್ದಾರೆ.