ಮುಂಬೈ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶಿವಭೋಜನ ಯೋಜನೆಯ ಲಾಭ ಒಂದು ಕೋಟಿಗೂ ಅಧಿಕಜನರಿಗೆ ದೊರೆತಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಹೇಳಿದರು. ಬಡವರಿಗೆ ₹10ರ ದರದಲ್ಲಿ ಊಟ ಒದಗಿಸುವ ಯೋಜನೆಯನ್ನು ಈ ವರ್ಷದ ಜನವರಿಯಲ್ಲಿ ಆರಂಭಿಸಲಾಗಿತ್ತು.
ಕೋವಿಡ್ನಿಂದಾಗಿ ಜಾರಿಗೊಳಿಸಿದ ಲಾಕ್ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರಿಗೆ ರೂ 5ಕ್ಕೆ ಪ್ಲೇಟ್ ಊಟ ಒದಗಿಸಲಾಗಿತ್ತು. ವಲಸೆ ಕಾರ್ಮಿಕರು, ಕಡುಬಡವರು ಇದರ ಅನುಕೂಲ ಪಡೆದಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 848 ಶಿವಭೋಜನ ಕೇಂದ್ರಗಳಿವೆ. ತಾಲ್ಲೂಕು ಮಟ್ಟದಲ್ಲಿಯೂ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು. ಇದುವರೆಗೂ ಯೋಜನೆಯಡಿ ಒಟ್ಟು 1,00,00,870 ಫ್ಲೇಟ್ ಊಟವನ್ನು ಪೂರೈಸಲಾಗಿದೆ. ಅಗತ್ಯವುಳ್ಳವರಿಗೆ ಈ ಯೋಜನೆ ವರದಾನವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.