ಪುಣೆ: ‘ಸಾಂಪ್ರದಾಯಿಕವಾಗಿ ಗೆಲ್ಲಲು ಸಾಧ್ಯವಿಲ್ಲದ ಕಾರಣ ಪಾಕಿಸ್ತಾನವು, ಭಯೋತ್ಪಾದನೆ ಮೂಲಕ ಪರೋಕ್ಷ ಯುದ್ಧದಲ್ಲಿ ತೊಡಗಿದೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಇಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಶನಿವಾರ ನಡೆದ 137ನೇ ನಿರ್ಗಮನ ಪಥಸಂಚಲನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪರೋಕ್ಷ ಯುದ್ಧದಲ್ಲೂ ಪಾಕಿಸ್ತಾನಕ್ಕೆ ಸೋಲಾಗಲಿದೆ. ಈ ಹಿಂದೆ 1965, 1971 ಮತ್ತು 1999ರಲ್ಲಿನ ಯುದ್ಧಗಳಲ್ಲಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲಾಗಿದೆ’ ಎಂದು ಹೇಳಿದರು.
ದೇಶದ ಜನರ ಭದ್ರತೆ ಮತ್ತು ಸಾರ್ವಭೌಮತ್ವ ಕಾಪಾಡಲು ಬದ್ಧರಾಗಿದ್ದೇವೆ. ಆದರೆ, ನಮ್ಮ ನೆಲದಲ್ಲಿ ಯಾರಾದರೂ ಭಯೋತ್ಪಾದನೆ ಶಿಬಿರ ನಡೆಸಲು ಮುಂದಾದರೆ ಅಥವಾ ದಾಳಿಯಲ್ಲಿ ಭಾಗಿಯಾಗಿದರೆ ತಕ್ಕ ಪ್ರತ್ಯುತ್ತರ ನೀಡಲಾಗುವುದು’ ಎಂದು ಹೇಳಿದರು.
‘ಭಾರತೀಯ ಸೇನೆ ದೇಶದ ಗಡಿ ಕಾಯುವ ಜತೆಗೆ ಗಡಿಯಾಚೆಗೂ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. 2016ರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ನಿರ್ದಿಷ್ಟ ದಾಳಿ ಮತ್ತು 2019ರಲ್ಲಿ ಬಾಲಾಕೋಟ್ನಲ್ಲಿ ನಡೆದ ವಾಯು ದಾಳಿ ದೇಶದ ಸೇನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ’ ಎಂದು ಹೇಳಿದರು.