ಕೊಚ್ಚಿ: ಈ ಬಾರಿಯ ತ್ರಿಶ್ಯೂರ್ ಪೂರಂನಲ್ಲಿ 54 ವರ್ಷದ ಥೇಚಿಕೊಟ್ಟುಕಾವು ರಾಮಚಂದ್ರನ್ ಹೆಸರಿನ ಆನೆಗೆ ಪಾಲ್ಗೊಳ್ಳಲು ಅವಕಾಶ ನೀಡುವ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈ ಬಗ್ಗೆ ಅಧಿಕಾರಿಗಳು ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಅನು ಶಿವರಾಮನ್ ಹೇಳಿದ್ದಾರೆ.
ಭಾರತದ ಅತಿ ಎತ್ತರದ ಸಾಕಾನೆ ಎಂಬ ಕೀರ್ತಿಗೆ ಪಾತ್ರವಾಗಿರುವ ಈ ಆನೆಯನ್ನು ಪೂರಂನ ಪ್ರಮುಖ ಆಚರಣೆಗಳಲ್ಲಿ ಬಳಸಿಕೊಳ್ಳಲು ಅನುಮತಿ ನೀಡಬೇಕೆಂದು ಆನೆಯ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು.
ಪೂರಂ ಆಚರಣೆಗಳಲ್ಲಿ ಈ ಆನೆಯನ್ನು ಬಳಸಿಕೊಳ್ಳಲು ಅಧಿಕಾರಿಗಳು ಅನುಮತಿ ನೀಡುವ ಸಾಧ್ಯತೆ ಇಲ್ಲ ಎಂದೂ ಆನೆಯ ಮಾಲೀಕರು ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಿದ್ದರು.
ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲು ಹೈಕೋರ್ಟ್ ನಿರಾಕರಿಸಿರುವ ಕಾರಣ ಜಿಲ್ಲಾಧಿಕಾರಿ, ವಿಭಾಗೀಯ ಅರಣ್ಯಾಧಿಕಾರಿ ಮತ್ತಿತರರನ್ನು ಒಳಗೊಂಡಿರುವ ತಜ್ಞರ ಸಮಿತಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ.
ಉತ್ಸವಗಳ ಮೆರವಣಿಗೆಯಲ್ಲಿ ಈ ಆನೆಯನ್ನು ಬಳಸಿಕೊಳ್ಳುವುದಕ್ಕೆ ಜಿಲ್ಲಾಡಳಿತವು ನಿಷೇಧ ಹೇರಿತ್ತು. ಈ ಆನೆಯು ಭಾಗಶಃ ಕುರುಡಾಗಿದೆ.
ಇತ್ತೀಚೆಗಿನ ಕೆಲವು ವರ್ಷಗಳಿಂದ ರಾಮಚಂದ್ರನ್ ಆನೆಯು ತ್ರಿಶ್ಯೂರ್ನ ವಡಕ್ಕುನಾಥನ್ ದೇವಾಲಯದ ದಕ್ಷಿಣ ಭಾಗದಲ್ಲಿರುವ ಬಾಗಿಲನ್ನು ತೆರೆಯುವ ಮೂಲಕ ಪೂರಂಗೆ ಚಾಲನೆ ನೀಡಲಾಗುತ್ತಿತ್ತು.