ನವದೆಹಲಿ: ಶನಿವಾರ ಪದ್ಮಶ್ರೀ ಪುರಸ್ಕಾರ ಸ್ವೀಕರಿಸಿದ ಸಾಲು ಮರದ ತಿಮ್ಮಕ್ಕ, ರಾಷ್ಟ್ರಪತಿ ಅವರಿಗೆ ಆಶೀರ್ವದಿಸಿದ್ದು ಗಮನ ಸೆಳೆಯಿತು.
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಈ ಸಾಲಿನ ಪದ್ಮ ಭೂಷಣ ಮತ್ತು ಪದ್ಮಶ್ರೀ ಪುರಸ್ಕಾರಗಳನ್ನು ಪ್ರದಾನ ಮಾಡಿದರು.
ಸಾಮಾನ್ಯವಾಗಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಕಟ್ಟುನಿಟ್ಟಿನ ಶಿಷ್ಟಾಚಾರಗಳನ್ನು ಅನುಸರಿಸಲಾಗುತ್ತದೆ. ಆದರೆ ಪದ್ಮಶ್ರೀ ಸ್ವೀಕರಿಸಲು ನಗುಮುಖದಿಂದ ವೇದಿಕೆ ಏರಿದ ತಿಮ್ಮಕ್ಕನ ಮುಗ್ಧತೆಗೆ ಈ ಶಿಷ್ಟಾಚಾರಗಳ ನಿರ್ಬಂಧವಾಗಲಿಲ್ಲ.
ಪ್ರಶಸ್ತಿ ಪಡೆಯುವಾಗ ಕ್ಯಾಮೆರಾ ಕಡೆಗೆ ನೋಡುವಂತೆ ಕೋವಿಂದ್ ಅವರು ತಿಳಿಸಿದಾಗ, ತಿಮ್ಮಕ್ಕ ಅವರಹಣೆಮುಟ್ಟಿ ಆಶೀರ್ವದಿಸಿದರು.ತಿಮ್ಮಕ್ಕನಿಗಿಂತಕೋವಿಂದ್ 33 ವರ್ಷ ಕಿರಿಯರು. ಅವರ ಈ ನಡೆಯಿಂದ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ನೆರೆದಿದ್ದ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿತು. ಜೋರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.
‘ಹುಲಿಕಲ್ನಿಂದ ಕಡೂರ್ ವರೆಗಿನ ಸುಮಾರು 4 ಕಿ.ಮೀ. ಹಾದಿಯಲ್ಲಿ ಆಲದ ಮರಗಳನ್ನು ನೆಟ್ಟು ಪೋಷಿಸಿರುವ ಕರ್ನಾಟಕದ ಪರಿಸರವಾದಿ, 107 ವರ್ಷ ವಯಸ್ಸಿನ ಸಾಲು ಮರದ ತಿಮ್ಮಕ್ಕ’ ಎಂದು ರಾಷ್ಟ್ರಪತಿ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.
President Kovind presents Padma Shri to Smt Saalumarada Thimmakka for Social Work. Aged 107, Smt Thimmakka is an environmentalist from Karnataka and is known for planting banyan trees along a 4 km stretch of highway from her village Hulikal to Kudur pic.twitter.com/90szHsDxWP
— President of India (@rashtrapatibhvn) March 16, 2019
ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ನಟ ಮನೋಜ್ ಬಾಜಪೇಯಿ, ಪರ್ವತಾರೋಹಿ ಬಚೇಂದ್ರಿ ಪಾಲ್, ಇಸ್ರೋ ವಿಜ್ಞಾನಿ ನಂಬಿ ನಾಯಾಯಣನ್ ಹಾಗೂ ಒಡಿಶಾದ ಚಹಾ ವ್ಯಾಪಾರಿ ಡಾ.ಪ್ರಕಾಶ್ ರಾವ್ ಸೇರಿ ಹಲವರಿಗೆ ಪದ್ಮ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
2019ರಲ್ಲಿ ನಾಲ್ಕು ಪದ್ಮ ವಿಭೂಷಣ, 14 ಪದ್ಮಭೂಷಣ ಹಾಗೂ 94 ಪದ್ಮಶ್ರೀ ಸೇರಿ ಒಟ್ಟು 112 ಪದ್ಮ ಪುರಸ್ಕಾರಗಳನ್ನು ಗಣರಾಜ್ಯೋತ್ಸವದಂದು ಪ್ರಕಟಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.