ಲಖನೌ: ರಾಜ್ಯದಲ್ಲಿ ನಡೆಯುತ್ತಿರುವ ಗುಂಪು ಹಲ್ಲೆಗಳನ್ನು ತಡೆಯಲು ಗೋಸಾಗಾಣಿಕೆಗೆ ಪರವಾನಗಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲು ಉತ್ತರಪ್ರದೇಶ ಸರ್ಕಾರ ಚಿಂತನೆ ನಡೆಸಿದೆ.
‘ಗೋಸೇವಾ ಆಯೋಗ’ದ ಸಭೆಯಲ್ಲಿ ಸೋಮವಾರ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ‘ರಾಜ್ಯದೊಳಗೆ ಅಥವಾ ರಾಜ್ಯದಿಂದ ಹೊರಗೆ ಗೋವುಗಳನ್ನು ಸಾಗಾಣಿಕೆ ಮಾಡುವವರಿಗೆ ಗೋಸೇವಾ ಆಯೋಗವೇ ಪರವಾನಗಿ ನೀಡಬೇಕು’ ಎಂದರು.
‘ಪರವಾನಗಿ ಪಡೆದು ಗೋವುಗಳನ್ನು ಸಾಗಾಟ ಮಾಡುವವರಿಗೆ ಸುರಕ್ಷತೆಯ ಖಾತರಿಯನ್ನು ಸಹ ಆಯೋಗ ನೀಡಬೇಕು. ಇಂಥ ಕ್ರಮದಿಂದ ರಾಜ್ಯದಲ್ಲಿ ಗುಂಪು ಹಲ್ಲೆ ನಡೆಯುವುದನ್ನು ತಡೆಯಬಹುದು’ ಎಂದು ಮುಖ್ಯಮಂತ್ರಿ ಹೇಳಿದರು.
‘ಗೋ ಸಾಕಾಣಿಕೆ ಮಾಡುವವರಿಗೆ ಮೇವು ಹಾಗೂ ಇತರ ಅಗತ್ಯ ವಸ್ತುಗಳನ್ನು ಖರೀದಿಸಲು, ತಾವು ಸಾಕಿದ ಒಂದು ಹಸುವಿಗೆ ದಿನವೊಂದಕ್ಕೆ ₹ 30ರಂತೆ ಆರ್ಥಿಕ ನೆರವು ನೀಡುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಬೇಕು. ವಾಣಿಜ್ಯ ಉದ್ದೇಶಕ್ಕೆ ಗೋವುಗಳನ್ನು ಸಾಕುವವರಿಗೆ ಈ ಹಣ ನೀಡಬಾರದು’ ಎಂದು ಸೂಚಿಸಿದರು.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನೇಕ ವಧಾಕೇಂದ್ರಗಳನ್ನು ಮುಚ್ಚಿದ್ದರಿಂದ ಮತ್ತು ಗೋ ಸಾಗಾಣಿಕೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರ ಪರಿಣಾಮವಾಗಿ ಉತ್ತರಪ್ರದೇಶದಲ್ಲಿ ಬೀಡಾಡಿ ದನಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಅನೇಕ ಕಡೆಗಳಲ್ಲಿ ಬೀಡಾಡಿ ಹಸುಗಳು ರೈತರಿಗೆ ಸಮಸ್ಯೆ ಉಂಟುಮಾಡುತ್ತಿವೆ.