ಭುವನೇಶ್ವರ: ಒಡಿಶಾದ ಪುರಿಯ ಜಗನ್ನಾಥ ರಥೋತ್ಸವಕ್ಕೆ ತಡೆಯಾಜ್ಞೆ ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್ ಮರು ಪರಿಶೀಲಿಸಬೇಕು ಎಂದು ಪುರಿ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಮತ್ತು ದೇಗುಲದ ಅರ್ಚಕರು ಮನವಿ ಮಾಡಿದ್ದಾರೆ.
ಮನ್ನೆಚ್ಚರಿಕೆ ಕ್ರಮಗಳೊಂದಿಗೆ ಹಬ್ಬ ಆಚರಿಸಲು ಅನುವು ಮಾಡಿಕೊಡಬೇಕು ಎಂದೂ ಆಗ್ರಹಿಸಿದ್ದಾರೆ.
ಕೋವಿಡ್–19 ಸೋಂಕಿನ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ರಥೋತ್ಸವಕ್ಕೆ ಗುರುವಾರ ತಡೆ ನೀಡಿತ್ತು.
‘ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಬೇಕು’ ಎಂದು ದೇಗುಲದ ಭಕ್ತರ ಸಂಘಟನೆ ಛತ್ತೀಸಾ ನಿಯೋಗ್ ಒತ್ತಾಯಿಸಿದೆ.
ಈ ಕುರಿತು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಪತ್ರ ಬರೆದಿರುವ ಛತ್ತೀಸಾ ನಿಯೋಗ್, ‘ರಥ ಯಾತ್ರೆಗಾಗಿ ದೇಗುಲದ ಆಡಳಿತ ಮಂಡಳಿ ಹಾಗೂ ರಾಜ್ಯ ಸರ್ಕಾರ ನಡೆಸಿರುವ ಸಿದ್ಧತಾ ಕಾರ್ಯಗಳು ಸುಪ್ರೀಂ ಕೋರ್ಟ್ ಗಮನಕ್ಕೆ ಬಂದಿಲ್ಲ’ ಎಂದಿದೆ.
ವಾರ್ಷಿಕ ರಥೋತ್ಸವ ನಡೆಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ‘ಶ್ರೀ ಜಗನ್ನಾಥ ಸೇನಾ’ ಮತ್ತು ‘ಶ್ರೀಕ್ಷೇತ್ರ ಸುರಕ್ಷಾ ಬಹಿನಿ’ ಎಂಬ ಸಂಘಟನೆಗಳು ಶುಕ್ರವಾರ ಪುರಿಯಲ್ಲಿ ಬಂದ್ ಆಚರಿಸಿವೆ.
ರಥಯಾತ್ರೆಯನ್ನು ರದ್ದುಪಡಿಸಬೇಕು ಇಲ್ಲವೇ ಮುಂದೂಡಬೇಕೆಂದು ಕೋರಿ ಸ್ವಯಂ ಸೇವಾ ಸಂಸ್ಥೆಯೊಂದು ಸುಪ್ರೀಂ ಕೋರ್ಟ್ಗೆ ಪಿಐಎಲ್ ಸಲ್ಲಿಸಿತ್ತು.