ಶ್ರೀನಗರ: ರಾಹುಲ್ ಗಾಂಧಿ ಸೇರಿದಂತೆ ವಿರೋಧಪಕ್ಷಗಳ ಮುಖಂಡರ ನಿಯೋಗವನ್ನು ಶನಿವಾರ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಜಮ್ಮು ಕಾಶ್ಮೀರದ ಅಧಿಕಾರಿಗಳು ನಿಯೋಗದ ಸದಸ್ಯರನ್ನು ದೆಹಲಿಗೆ ವಾಪಸ್ ಕಳುಹಿಸಿದ್ದಾರೆ.
ಮುಖಂಡರನ್ನು ಸಂಜೆ 4.15ರ ಹೊತ್ತಿಗೆ ವಿಮಾನದಲ್ಲಿ ದೆಹಲಿಗೆ ಕಳುಹಿಸಲಾಯಿತು. ರಾಜ್ಯ ಸರ್ಕಾರ ಇವರಿಗಾಗಿ ವಿಮಾನದಲ್ಲಿ ಸೀಟು ಕಾಯ್ದಿರಿಸಿತ್ತು. ಕಾಶ್ಮೀರದಲ್ಲಿ ಹಿಂಸಾಚಾರದ ವರದಿಗಳು ಬಂದಿವೆ ಎಂದು ಇತ್ತೀಚೆಗೆ ರಾಹುಲ್ ಆರೋಪಿಸಿದ್ದರು.
ಇದನ್ನು ಅಲ್ಲಗಳೆದಿದ್ದ ರಾಜ್ಯಪಾಲ, ಸ್ವತಃ ಭೇಟಿ ನೀಡುವಂತೆ ರಾಹುಲ್ಗೆ ಸವಾಲು ಹಾಕಿದ್ದರು. ರಾಹುಲ್ ಒಪ್ಪಿದ್ದರೂ, ಆಹ್ವಾನವನ್ನು ಸರ್ಕಾರ ವಾಪಸ್ ಪಡೆದಿತ್ತು.
ಗಡಿನಿಯಂತ್ರಣ ರೇಖೆಯಲ್ಲಿ ಕಟ್ಟೆಚ್ಚರ: ಗಡಿಯಾಚೆಗಿನ ಭಯೋತ್ಪಾದನೆ ಬೆದರಿಕೆ ಹಿನ್ನೆಲೆಯಲ್ಲಿ ಕಾಶ್ಮೀರದ ಗಡಿನಿಯಂತ್ರಣ ರೇಖೆ ಹಾಗೂ ಅಂತರರಾಷ್ಟ್ರೀಯ ಗಡಿಯಲ್ಲಿ (ಐಬಿ) ಭದ್ರತಾಪಡೆಗಳು ಕಟ್ಟೆಚ್ಚರ ವಹಿಸಿವೆ.
ಮಧ್ಯಪ್ರವೇಶಕ್ಕೆ ಅವಕಾಶ: ಪಿಸಿಐ ಮನವಿ ಕಾಶ್ಮೀರದಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಕ್ತ ಓಡಾಟಕ್ಕೆ ಇರುವ ನಿರ್ಬಂಧವನ್ನು ಸಡಿಲಿಸಬೇಕು ಎಂದು ಕಾಶ್ಮೀರ್ ಟೈಮ್ಸ್ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮಧ್ಯಪ್ರವೇಶಕ್ಕೆ ತನಗೆ ಅವಕಾಶ ನೀಡಬೇಕು ಎಂದು ಭಾರತೀಯ ಪತ್ರಿಕಾ ಮಂಡಳಿಯು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದೆ.
‘ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡುವುದು ಮತ್ತು ಪತ್ರಿಕೆಗಳ ಗುಣಮಟ್ಟವನ್ನು ಉತ್ತಮಪಡಿಸುವ ಉದ್ದೇಶದಿಂದಲೇ ಪತ್ರಿಕಾ ಮಂಡಳಿಯನ್ನು ಸ್ಥಾಪಿಸಿರುವುದರಿಂದ ಈ ವಿಚಾರದಲ್ಲಿ ಮಧ್ಯಪ್ರವೇಶಕ್ಕೆ ತನಗೆ ಅವಕಾಶ ನೀಡಬೇಕು’ ಎಂದು ಮಂಡಳಿ ವಾದಿಸಿದೆ.