ನವದೆಹಲಿ : ‘ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಮರಳಿದರೆ ಅದಕ್ಕೆ ರಾಹುಲ್ ಗಾಂಧಿ ಅವರೇ ಹೊಣೆಗಾರರು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ಹೇಳಿದರು.
ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು, ‘ರಾಹುಲ್ಗಾಂಧಿ ಅವರು ಉತ್ತರಪ್ರದೇಶದಲ್ಲಿ ಎಸ್ಪಿ–ಬಿಎಸ್ಪಿ ಮೈತ್ರಿ, ಕೇರಳದಲ್ಲಿ ಎಡರಂಗ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ರಾಜಧಾನಿಯಲ್ಲಿ ಎಎಪಿಗೆ ಧಕ್ಕೆ ಉಂಟು ಮಾಡಿದ್ದಾರೆ’ ಎಂದು ದೂರಿದರು.
‘ಕಾಂಗ್ರೆಸ್ ಪಕ್ಷವು ಬಿಜೆಪಿ ವಿರೋಧಿ ಪಕ್ಷಗಳ ವಿರುದ್ಧವೇ ಚುನಾವಣೆಯಲ್ಲಿ ಸ್ಪರ್ಧೆ ನಡೆಸುತ್ತಿರುವಂತಿದೆ’ ಎಂದು ಹೇಳಿದರು.
‘ಮೋದಿಗೆ ಹೋಲಿಸಿದರೆ ಮನಮೋಹನ್ ಸಿಂಗ್ ಅವರು ಸಾವಿರ ಪಟ್ಟು ಉತ್ತಮ ಪ್ರಧಾನಿ. ಈ ಚುನಾವಣೆಯ ಬಳಿಕ ಬಿಜೆಪಿ ಮರಳಿ ಅಧಿಕಾರಕ್ಕೆ ಬರುವುದಿಲ್ಲ. ನಮ್ಮ ಏಕೈಕ ಗುರಿ ಮೋದಿ, ಶಾ ಅಧಿಕಾರಕ್ಕೆ ಮರಳದಂತೆ ತಡೆಯುವುದು’ ಎಂದರು.