ಜೈಪುರ: ರಾಜಸ್ಥಾನ ಸಚಿವ ಸಂಪುಟದಲ್ಲಿರುವಸಚಿವರಲ್ಲಿ ಮೂವರು ಸಚಿವರು ಪಿಎಚ್ಡಿ, ಇಬ್ಬರು ಎಂಬಿಎ, ಆರು ಸಚಿವರು ಎಲ್ಎಲ್ಬಿ ಮತ್ತು ಒಬ್ಬರು ಇಂಜಿನಿಯರಿಂಗ್ ಪದವಿ ಪಡೆದವರಾಗಿದ್ದಾರೆ. ಏಳು ಸಚಿವರು ಪದವಿ ಪೂರೈಸಿಲ್ಲ.
ಸೋಮವಾರ 23 ಶಾಸಕರು ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದು ಇದರಲ್ಲಿ ಎಂಟು ಸಚಿವರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ರಮೇಶ್ ಚಂದ್ ಮೀನಾ 1993ರಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪೂರೈಸಿದ್ದರು.ಕರೌಲಿಯ ಸಪೋತರ ಕ್ಷೇತ್ರದಿಂದ ಆಯ್ಕೆಯಾದ ರಮೇಶ್ ಈಗ ಸಂಪುಟ ಸಚಿವರಾಗಿದ್ದಾರೆ.
ರಾಜ್ಯ ಸಚಿವರಾಗಿ ನೇಮಕವಾದ ಬಿ.ಡಿ ಕಲ್ಲಾ, ರಘು ಶರ್ಮಾ ಮತ್ತು ಆರ್ಎಲ್ಡಿ ನಾಯಕ ಸುಭಾಶ್ ಗಾರ್ಗ್ - ಇವರೆಲ್ಲರೂ ಪಿಎಚ್ಡಿ ಪಡೆದವರಾಗಿದ್ದಾರೆ. ಇದರಲ್ಲಿ ಕಲ್ಲಾ ಮತ್ತು ರಘು ಶರ್ಮಾ ಅವರು ಎಲ್ಎಲ್ಬಿ ಪದವಿಯನ್ನು ಹೊಂದಿದ್ದಾರೆ.
ಶಾಂತಿ ಕುಮಾರ್ ಧರಿವಾಲ್, ಗೋವಿಂದ್ ಸಿಂಗ್ ದೊತಾಸರ, ಸುಖ್ರಾಮ್ ಬಿಷ್ನೋಯ್ ಮತ್ತು ತಿಕಾರಾಮ್ ಜುಲ್ಲೆ ಅವರು ಕೂಡಾ ಎಲ್ಎಲ್ಬಿ ಪದವೀಧರರಾಗಿದ್ದಾರೆ.
ರಾಜ್ಯ ಸಚಿವರಾದ ಲಾಲ್ ಜತವ್ ಅವರು 10ನೇ ತರಗತಿ ತೇರ್ಗಡೆಯಾದವರಾಗಿದ್ದು, ಸಂಪುಟ ಸಚಿವರಾದ ಉದಯ್ ಲಾಲ್ ಮತ್ತು ರಾಜ್ಯ ಸಚಿವ ಅರ್ಜುನ್ ಬಮ್ನಿಯಾ ಎರಡನೇ ವರ್ಷ ಪದವಿವರೆಗೆ (ಪದವಿ ಪೂರೈಸಿಲ್ಲ) ಓದಿದ್ದಾರೆ. 5 ಸಚಿವರು ಸೀನಿಯರ್ ಸೆಕೆಂಡರಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿದ್ದಾರೆ.
ಲಾಲ್ ಚಂದ್ ಕಟಾರಿಯಾ, ವಿಶ್ವೇಂದ್ರ ಸಿಂಗ್, ರಮೇಶ್ ಚಂದ್ ಮೀನಾ, ಅರ್ಜುನ್ ಸಿಂಗ್ ಬಮ್ನಿಯಾ, ಭನ್ವರ್ ಸಿಂಗ್ ಭಾಟಿ, ಅಶೋಕ್ ಚಂದ್ನಾ, ಭಜನ್ ಲಾಲ್ ಮತ್ತು ತಿಕಾರಾಮ್ ಜುಲ್ಲೇ ಅವರ ವಿರುದ್ಧ ಪ್ರಕರಣಗಳು ಇವೆ. ಈ ಪೈಕಿಕಿರಿಯ ಸಚಿವರಾದ ಅಶೋಕ್ ಚಂದ್ನಾ ಅವರ ವಿರುದ್ಧ 10 ಪ್ರಕರಣಗಳಿವೆ.