ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಒಕೆ ಮರಳಿ ಭಾರತಕ್ಕೆ: ರಾಜನಾಥ್‌ ಸಿಂಗ್‌

ಪಾಕ್‌ ಆಕ್ರಮಿತ ಕಾಶ್ಮೀರ ಸ್ವಾಧೀನದ ವಿಚಾರ ಪ್ರಸ್ತಾಪಿಸಿದ ರಕ್ಷಣಾ ಸಚಿವ ರಾಜನಾಥ್‌
Last Updated 14 ಜೂನ್ 2020, 16:41 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನವು ಅಕ್ರಮವಾಗಿ ತನ್ನ ವಶದಲ್ಲಿ ಇರಿಸಿಕೊಂಡಿರುವ ಭಾರತದ ಭೂಭಾಗವನ್ನು ಮರಳಿ ಪಡೆದುಕೊಳ್ಳಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾನುವಾರ ಪುನರುಚ್ಚರಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ‘ರಾಷ್ಟ್ರಾಭಿಮಾನ’ದ ವಿಚಾರದಲ್ಲಿ ಯಾವ ರಾಜಿಯನ್ನೂ ಮಾಡಿಕೊಳ್ಳುವುದಿಲ್ಲ. ಈಗ ಭಾರತವು ದುರ್ಬಲ ದೇಶವೇನೂ ಅಲ್ಲ ಎಂದು ಸಿಂಗ್‌ ಹೇಳಿದ್ದಾರೆ.

ಗಡಿಗೆ ಸಂಬಂಧಿಸಿ ಚೀನಾ ಮತ್ತು ನೇಪಾಳವು ಭಾರತದ ಜತೆಗೆ ತಿಕ್ಕಾಟಕ್ಕೆ ಇಳಿದಿರುವ ಸಂದರ್ಭದ ಲಾಭ ಪಡೆದುಕೊಳ್ಳಲು ಪಾಕಿಸ್ತಾನ ಸರ್ಕಾರ ಪ್ರಯತ್ನಿಸುತ್ತಿದೆ. ಈ ಸನ್ನಿವೇಶದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಮರಳಿ ಪಡೆಯುವ ವಿಚಾರವನ್ನು ಸಿಂಗ್‌ ಪ್ರಸ್ತಾಪಿಸಿದ್ದಾರೆ. ಚೀನಾದ ಜತೆಗಿನ ಗಡಿ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗುವುದು. ಚೀನಾ ಕೂಡ ಇದೇ ಧೋರಣೆ ಹೊಂದಿದೆ ಎಂದು ಅವರು ಹೇಳಿದ್ದಾರೆ.

‘ಜಮ್ಮು–ಕಾಶ್ಮೀರದ ಅಭಿವೃದ್ಧಿಯೇ ತನ್ನ ಆದ್ಯತೆ ಎಂಬ ಸಂದೇಶವನ್ನು ರವಾನಿಸುವಲ್ಲಿ ಕೇಂದ್ರ ಸರ್ಕಾರವು ಯಶಸ್ವಿಯಾಗಿದೆ. ಜಮ್ಮು–ಕಾಶ್ಮೀರವನ್ನು ಕೇಂದ್ರಾಡಳಿತದ ಎರಡು ಪ್ರದೇಶಗಳಾಗಿ ವಿಂಗಡಿಸಿರುವುದರಿಂದ ಈ ಪ್ರದೇಶದ ಅಭಿವೃದ್ಧಿಗೆ ವೇಗ ಸಿಕ್ಕಿದೆ. ನಮ್ಮ ಪ್ರಯತ್ನವು ಮುಂದಿನ ಐದು ವರ್ಷದಲ್ಲಿ ಈ ಪ್ರದೇಶದ ಮುಖಛಾಯೆಯನ್ನೇ ಬದಲಿಸಲಿದೆ. ಆಗ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಅಸೂಯೆಪಡಲಿದ್ದಾರೆ. ಭಾರತದ ಜತೆಗೆ ಇದ್ದಿದ್ದರೆ ನಮ್ಮ ವಿಧಿಯೇ ಬದಲಾಗಿರುತ್ತಿತ್ತು ಎಂದು ಅವರು ಭಾವಿಸಲಿದ್ದಾರೆ’ ಎಂದು ಬಿಜೆಪಿಯ ಜನಸಂವಾದ ಆನ್‌ಲೈನ್‌ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಹೇಳಿದ್ದಾರೆ.

ಭಾರತವು ವಿಸ್ತರಣವಾದಿ ಆಕಾಂಕ್ಷೆಗಳನ್ನು ಹೊಂದಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಷಿ ಅವರು ಭಾನುವಾರ ಹೇಳಿದ್ದಾರೆ.‍ಚೀನಾದ ಜತೆಗಿನ ಪೂರ್ವ ಲಡಾಖ್‌ನ ಗಡಿ ಮತ್ತು ನೇಪಾಳದ ಜತೆಗಿನ ಗಡಿ ಬಿಕ್ಕಟ್ಟುಗಳೆರಡನ್ನೂ ಉಲ್ಲೇಖಿಸಿ ಅವರು ಮಾತನಾಡಿದ್ದಾರೆ.

‘ಬಲ ಹೆಚ್ಚಳ ಭಯಪಡಿಸಲಿಕ್ಕಲ್ಲ’

ಚೀನಾದ ಜತೆಗಿನ ಗಡಿ ಬಿಕ್ಕಟ್ಟನ್ನು ರಾಜತಾಂತ್ರಿಕ ಮತ್ತು ಸೇನಾ ಮಟ್ಟದ ಮಾತುಕತೆ ಮೂಲಕ ಬಗೆಹರಿಸಲು ಯತ್ನಿಸಲಾಗುತ್ತಿದೆ. ಈಗ ಭಾರತವು ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಹೆಚ್ಚು ಪ್ರಬಲವಾಗಿದೆ. ಭಾರತ ಈಗ ದುರ್ಬಲ ಅಲ್ಲವೇ ಅಲ್ಲ. ನಮ್ಮ ಬಲ ಹೆಚ್ಚಿದೆ ಎಂದು ರಾಜನಾಥ್‌ ಹೇಳಿದ್ದಾರೆ.

ನಾವು ಶಕ್ತಿ ಹೆಚ್ಚಿಸಿಕೊಂಡಿರುವುದು ಯಾರನ್ನೂ ಭಯಪಡಿಸುವುದಕ್ಕಲ್ಲ. ನಮ್ಮ ದೇಶದ ಸುರಕ್ಷತೆಯೇ ಈ ಬಲ ಹೆಚ್ಚಳದ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭವಿಷ್ಯದಲ್ಲಿ ಏನಾಗುತ್ತದೆ ಕಾಯ್ದು ನೋಡೋಣ. ಭಾರತದ ಜತೆ ಸೇರುತ್ತೇವೆ ಎಂಬ ಬೇಡಿಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರಿಂದಲೇ ಬರಬಹುದು.

– ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ

ಗಡಿ ರಸ್ತೆ ನಿರ್ಮಾಣಕ್ಕೆ ಹೊರಟ ಕಾರ್ಮಿಕರು

ಲೇಹ್‌‌– ಲಡಾಖ್‌ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲು 1,500ಕ್ಕೂ ಹೆಚ್ಚು ವಲಸೆ ಕಾರ್ಮಿಕರು ವಿಶೇಷ ರೈಲಿನ ಮೂಲಕ ಜಾರ್ಖಂಡ್‌ನಿಂದ ತೆರಳಿದರು.

ಗಡಿ ರಸ್ತೆ ಸಂಘಟನೆಯು (ಬಿಆರ್‌ಒ) ಈ ರೈಲು ವ್ಯವಸ್ಥೆ ಮಾಡಿತ್ತು. ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ‌ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ‌

‘ಭಾರತ– ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ದೇಶಕ್ಕಾಗಿ ಧೈರ್ಯದಿಂದ ಈ ಪ್ರಯಾಣ ಬೆಳೆಸಿದ್ದೀರಿ. ನೀವು ಯಾವ ಯೋಧರಿಗೂ ಕಡಿಮೆ ಇಲ್ಲ. ನಿಮ್ಮ ಪ್ರಯಾಣ ಸುಖಕರವಾಗಿರಲಿ’ ಎಂದು ಹಾರೈಸಿದರು.

ದೈಹಿಕವಾಗಿ ಸದೃಢವಾಗಿರುವ, ಪ್ರತಿಕೂಲ ಪರಿಸ್ಥಿತಿ ಮತ್ತು ಪ್ರತಿಕೂಲ ಹವಾಮಾನಕ್ಕೆ ಒಗ್ಗಿಕೊಂಡು ಕೆಲಸ ಮಾಡಲು ಶಕ್ತರಾಗಿರುವವರನ್ನೇ ಆಯ್ಕೆ ಮಾಡಿ ಕಳುಹಿಸಲಾಗಿದೆ.

ಈ ಕಾರ್ಮಿಕರಿಗೆ ಸೂಕ್ತ ವೇತನದ ಜೊತೆ ಇತರೆ ಸವಲತ್ತುಗಳನ್ನು ನೀಡುವ ಒಪ್ಪಂದ ಪತ್ರಕ್ಕೆ ಬಿಆರ್‌ಒ ಸಹಿ ಹಾಕಿದೆ. ಈ ಹಿಂದೆಯೂ ಈ ಕಾರ್ಮಿಕರು ಲೇಹ್‌- ಲಡಾಖ್‌ನಲ್ಲಿ ಕೆಲಸ ಮಾಡಿದ್ದರು. ಆದರೆ, ಮಧ್ಯವರ್ತಿಗಳ ಕಾರಣದಿಂದಾಗಿ ಅವರಿಗೆ ಸರಿಯಾದ ವೇತನ ದೊರೆತಿರಲಿಲ್ಲ.

ಮುಖ್ಯಮಂತ್ರಿಈ ಕಾರ್ಮಿಕರಿಗೆ ಉದ್ಯೋಗ ಕಾರ್ಡ್ ಮತ್ತು ಪಡಿತರ ಕಿಟ್‌ಗಳನ್ನು ವಿತರಿಸಿದರು. ಕಾರ್ಮಿಕರಿಗೆ ಈ ಹಿಂದೆ ₹ 15 ಸಾವಿರ ವೇತನ ನೀಡಲಾಗುತ್ತಿತ್ತು. ಈಗ ₹ 18, ಸಾವಿರಕ್ಕೆ ಏರಿಕೆ ಮಾಡಲಾಗಿದೆ.

ಲಾಕ್‌ಡೌನ್‌ನಿಂದ ಲೇಹ್– ಲಡಾಖ್‌ನಲ್ಲಿ ಸಿಲುಕಿಕೊಂಡಿದ್ದ ಈ ಕಾರ್ಮಿಕರನ್ನು ಕಳೆದ ತಿಂಗಳು ವಿಮಾನದ ಮೂಲಕ ಸರ್ಕಾರ ರಾಜ್ಯಕ್ಕೆ ಕರೆಸಿಕೊಂಡಿತ್ತು.

ನೇಪಾಳ: ಕ್ಷೀಣಿಸಿದ ಮಾತುಕತೆ ಸಾಧ್ಯತೆ

ಭಾರತಕ್ಕೆ ಸೇರಿರುವ 400 ಚದರ ಕಿ.ಮೀ. ಭೂಪ್ರದೇಶವನ್ನು ತನ್ನದೆಂದು ಹೇಳಿಕೊಳ್ಳುವ ನೇಪಾಳದ ಪರಿಷ್ಕೃತ ಭೂಪಟಕ್ಕೆ ನೇಪಾಳ ಸಂಸತ್ತಿನ ಮೇಲ್ಮನೆಯೂ ಅನುಮೋದನೆ ನೀಡುವ ಹಂತದಲ್ಲಿದೆ. ಇದರಿಂದಾಗಿ, ಗಡಿ ವಿಚಾರವಾಗಿ ಆ ದೇಶದ ಜತೆ ಮಾತುಕತೆ ಸಾಧ್ಯತೆ ಕ್ಷೀಣಿಸಿದೆ.

ಹೊಸದಾಗಿ ಉಂಟಾಗಿರುವಈ ಗಡಿ ವಿವಾದವು ನೇಪಾಳದ ಜತೆಗೆ ಭಾರತವು ದೀರ್ಘಕಾಲದಿಂದ ಹೊಂದಿರುವ ಸಂಬಂಧವನ್ನು ಹಾಳು ಮಾಡಿದ್ದಷ್ಟೇ ಅಲ್ಲ, ಆ ದೇಶದ ಜತೆಗೆ ಸ್ನೇಹ ಬಯಸುತ್ತಿದ್ದ ಚೀನಾಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ. ಇನ್ನು ನೇಪಾಳದಲ್ಲಿ ಭೌಗೋಳಿಕವಾಗಿ ಚೀನಾದ ಪ್ರಭಾವ ಹೆಚ್ಚಾಗಲಿದೆ ಎಂದು ಬಣ್ಣಿಸಲಾಗುತ್ತಿದೆ.

ಲಡಾಖ್‌ನಲ್ಲಿ ಗಡಿ ಸಂಬಂಧವಾಗಿ ಚೀನಾದ ಜತೆಗೆ ನಡೆಯುತ್ತಿರುವ ಸಂಘರ್ಷ ಇನ್ನೂ ಬಗೆಹರಿದಿಲ್ಲ. ಇನ್ನೊಂದೆಡೆ, ಕಾಶ್ಮೀರ ವಿಚಾರವನ್ನು ಜಾಗತಿಕ ಮಟ್ಟದಲ್ಲಿ ಪ್ರತಿಧ್ವನಿಸುವಂತೆ ಮಾಡುವ ಪಾಕಿಸ್ತಾನದ ಪ್ರಯತ್ನಕ್ಕೆ ಚೀನಾ ಬೆಂಬಲ ನೀಡುತ್ತಿದೆ. ಭಾರತಕ್ಕೆ ಚೀನಾ ಹಾಗೂ ನೇಪಾಳದ ಜತೆಗೆ ಉಂಟಾಗಿರುವ ಸಂಘರ್ಷದ ಲಾಭವನ್ನು ಪಡೆಯಲು ಮುಂದಾಗಿರುವ ಪಾಕಿಸ್ತಾನವು, ‘ಭಾರತವು ವಿಸ್ತರಣಾವಾದಿ ಆಕಾಂಕ್ಷೆಗಳಿಂದ ಇಂಥ ಕೃತ್ಯ ನಡೆಸುತ್ತಿದೆ’ ಎಂದು ಜಾಗತಿಕ ಮಟ್ಟದಲ್ಲಿ ಚಿತ್ರಿಸಲು ಆರಂಭಿಸಿದೆ.

ಸಾರ್ಕ್‌ ರಾಷ್ಟ್ರಗಳಲ್ಲಿ ತನ್ನ ನಾಯಕತ್ವವನ್ನು ಪುನಃ ಪ‍್ರತಿಪಾದಿಸಲು ಮುಂದಾಗಿರುವ ಭಾರತಕ್ಕೆ ನೇಪಾಳ ಜತೆಗಿನ ಈ ವಿವಾದವು ಹಿನ್ನಡೆಯಾಗಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ. 2016ರಲ್ಲಿ ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿದ್ದ ಸಾರ್ಕ್ ಶೃಂಗಸಭೆಯಿಂದ ಹೊರಗುಳಿಯಲು ಭಾರತ ಸರ್ಕಾರ ನಿರ್ಧರಿಸಿದಾಗ, ಆ ನಿಲುವಿಗೆ ನೇಪಾಳ ಬೆಂಬಲ ನೀಡಿತ್ತು. ಕೋವಿಡ್‌–19 ನಿಯಂತ್ರಣಕ್ಕೆ ಸಂಘಟಿತ ಪ್ರಯತ್ನ ನಡೆಸುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನವನ್ನು ಪಾಕಿಸ್ತಾನ‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಹಾದಿತಪ್ಪಿಸುವ ಪ್ರಯತ್ನ ಮಾಡಿದರೂ, ಒಲಿ ನೇತೃತ್ವದ ನೇಪಾಳ ಸರ್ಕಾರವು ಭಾರತದ ನಿಲುವನ್ನು ಬೆಂಬಲಿಸಿತ್ತು. ಅಷ್ಟೇ ಅಲ್ಲ, ಏಪ್ರಿಲ್‌ 10ರಂದು ಮೋದಿ ಅವರಿಗೆ ಕರೆ ಮಾಡಿದ್ದ ಒಲಿ ಅವರು ಸಾರ್ಕ್‌ ರಾಷ್ಟ್ರಗಳನ್ನು ಒಗ್ಗೂಡಿಸುವ ಅವರ ಪ್ರಯತ್ನವನ್ನು ಶ್ಲಾಘಿಸಿದ್ದರು.

ಇದಾಗಿ ಒಂದು ತಿಂಗಳಲ್ಲಿ ನಿಲುವು ಬದಲಿಸಿದ ಒಲಿ, ಗಡಿ ವಿಚಾರದಲ್ಲಿ ಭಾರತದ ಜತೆಗೆ ತಗಾದೆ ತೆಗೆದಿದ್ದಾರೆ. ನೇಪಾಳ ಕಮ್ಯುನಿಸ್ಟ್‌ ಪಾರ್ಟಿಯ ಮುಖಂಡರಾದ ಪುಷ್ಪಕಮಲ್‌ ದಹಲ್‌ ಮತ್ತು ಎ.ಕೆ.ಎ. ಪ್ರಚಂಡ ಜತೆಗೆ ಒಲಿ ಅವರ ಸಂಬಂಧ ಹಳಸಿ, ಸರ್ಕಾರ ಉರುಳುವ ಸ್ಥಿತಿಗೆ ಬಂದಿದ್ದಾಗ, ಈ ನಾಯಕರ ನಡುವೆ ಚೀನಾ ರಾಜಿ ಸಂಧಾನ ನಡೆಸಿ, ಒಲಿ ನೇತೃತ್ವದ ಸರ್ಕಾರವನ್ನು ಉಳಿಸಿತ್ತು. ಇದಾದ ನಂತರ ನೇಪಾಳದ ವರಸೆ ಬದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT