ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾತ್ಮ ಗಾಂಧಿ ಪ್ರತಿಕೃತಿಗೆ ಗುಂಡು ಹಾರಿಸಿದ್ದ ಹಿಂದೂ ಮಹಾಸಭಾ ನಾಯಕಿ ಬಂಧನ

ಹೊಸ ಆಚರಣೆ ಎಂದಿದ್ದ ಪೂಜಾ
Last Updated 6 ಫೆಬ್ರುವರಿ 2019, 4:46 IST
ಅಕ್ಷರ ಗಾತ್ರ

ಅಲಿಗಡ:ಹುತಾತ್ಮರ ದಿನದಂದು (ಜನವರಿ 30) ಉತ್ತರ ಪ್ರದೇಶದಲ್ಲಿ ಮಹಾತ್ಮ ಗಾಂಧಿ ಹತ್ಯೆ ಘಟನೆಯನ್ನು ಮರುಸೃಷ್ಟಿಸಿ ಸಂಭ್ರಮಾಚರಿಸಿ ವಿಕೃತಿ ಮೆರೆದಿದ್ದ ಘಟನೆ ರಾಷ್ಟ್ರದಾದ್ಯಂತ ಚರ್ಚೆಯಾಗುತ್ತಿದ್ಧಂತೆ, ಘಟನೆಯ ರೂವಾರಿ ಪೂಜಾ ಶಕುನ್‌ ಪಾಂಡೆ ನಾಪತ್ತೆಯಾಗಿದ್ದರು. ಮಂಗಳವಾರ ಅಲಿಗಡದಲ್ಲಿ ಅವರನ್ನು ಬಂಧಿಸಲಾಗಿದೆ.

ಅಖಿಲ ಭಾರತ ಹಿಂದೂ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಮತ್ತು ಅವರ ತಂಡ, ಮಹಾತ್ಮ ಗಾಂಧಿ ಅವರ 71ನೇ ಪುಣ್ಯಸ್ಮರಣೆಯ ದಿನ ಗಾಂಧಿ ಪ್ರತಿಕೃತಿಗೆ ಗುಂಡು ಹಾರಿಸುವ ಮೂಲಕ ಹತ್ಯೆ ಘಟನೆಯನ್ನು ಮರುಸೃಷ್ಟಿಸಲಾಗಿತ್ತು. ಬಲಪಂಥೀಯರ ಈ ಆಚರಣೆ ಸಂಬಂಧ ಉತ್ತರ ಪ್ರದೇಶ ಪೊಲೀಸರು 12 ಮಂದಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು. ವಿಡಿಯೊದಲ್ಲಿ ಕಾಣಿಸಿಕೊಂಡಿದ್ದ ಇತರೆ ಮೂವರನ್ನು ಕಳೆದ ವಾರ ಪೊಲೀಸರು ಬಂಧಿಸಿದ್ದರು. ಪೂಜಾ ಪತಿ ಅಶೋಕ್ ಪಾಂಡೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೇಸರಿಧಾರಿಯಾಗಿದ್ದ ಪೂಜಾ ಶಕುನ್‌ ಪಾಂಡೆ ಏರ್‌ ಪಿಸ್ತೂಲ್‌ ಮೂಲಕ ಗಾಂಧೀಜಿ ಚಿತ್ರಕ್ಕೆ ಗುಂಡು ಹಾರಿಸಿದ್ದು ಮತ್ತು ಗಾಂಧೀಜಿ ಹತ್ಯೆ ಮಾಡಿದ ನಾಥೂರಾಮ್‌ ಗೋಡ್ಸೆ ಚಿತ್ರಕ್ಕೆ ಮಾಲೆ ಹಾಕಿದ ವಿಡಿಯೊ, ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು. ಪೂಜಾ ಮಾಡಿದ ಕೃತ್ಯದ ವಿರುದ್ಧ ಬಹಳಷ್ಟು ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

’ದಸರ ಸಂದರ್ಭದಲ್ಲಿ ರಾವಣ ಪ್ರತಿಕೃತಿ ದಹಿಸುವಂತೆ ಇದೂ ಸಹ ವಾರ್ಷಿಕ ಆಚರಣೆಯಾಗಲಿದೆ. ಸಂಘದಿಂದ ಹೊಸ ಸಂಪ್ರದಾಯ ಪ್ರಾರಂಭಿಸಲಾಗಿದೆ’ ಎಂದು ಮಾಧ್ಯಮಗಳಿಗೆ ಪೂಜಾ ಪ್ರತಿಕ್ರಿಯಿಸಿದ್ದರು.ಗಾಂಧಿ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ನೌರಂಗಬಾದ್‌ನಲ್ಲಿರುವ ಹಿಂದೂ ಮಹಾಸಭಾ ಕಚೇರಿ ಹೊರ ಭಾಗದಲ್ಲಿ ಈ ಕೃತ್ಯ ನಡೆದಿತ್ತು.

ಹಿಂದೂ ಮಹಾಸಭಾ ನಾಥೂರಾಮ್‌ ಗೋಡ್ಸೆ ಕಾರ್ಯವನ್ನು ದೇಶಭಕ್ತಿ ಎಂದೇ ಬಿಂಬಿಸಲು ಪ್ರಯತ್ನಿಸುತ್ತಿದ್ದು, 2015ರಲ್ಲಿ ಹಿಂದೂ ಮಹಾಸಭಾ ಮುಖಂಡ ಸ್ವಾಮಿ ಪ್ರಣವಾನಂದ ಗೋಡ್ಸೆಯ ಪ್ರತಿಮೆಗಳನ್ನು ಅನಾವರಣಗೊಳಿಸುವುದಾಗಿ ಘೋಷಿಸಿದ್ದರು. ಕರ್ನಾಟಕದ ಆರು ಜಿಲ್ಲೆಗಳಲ್ಲಿ ಗೋಡ್ಸೆ ಪ್ರತಿಮೆ ಸ್ಥಾಪಿಸುವ ಯೋಜನೆ ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT