ಮೊರಾದಾಬಾದ್ (ಉತ್ತರ ಪ್ರದೇಶ): ‘ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೂ (ಆರ್ಎಸ್ಎಸ್), ರಾಜಕೀಯಕ್ಕೂ ಸಂಬಂಧ ಇಲ್ಲ. ದೇಶದ ನೈತಿಕ, ಸಾಂಸ್ಕೃತಿಕ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯವನ್ನು ಸಂಘಟನೆ ಮಾಡುತ್ತಿದೆ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಇಲ್ಲಿ ನಡೆಯುತ್ತಿರುವ ಆರ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು, ‘ಸಮಾಜದ ಎಲ್ಲ ವರ್ಗದ ಜನರೂ ಸಂಘಟನೆಯ ಭಾಗವೇ ಆಗಿದ್ದಾರೆ. ಈ ಪೈಕಿ ಕೆಲವರು ರಾಜಕೀಯ ಪಕ್ಷಗಳಲ್ಲಿ ಸಕ್ರಿಯರಾಗಿದ್ದಾರೆ’ ಎಂದರು.
‘ಚುನಾವಣೆ ಪ್ರಕ್ರಿಯೆಯಲ್ಲಿ ನಾವು ತೊಡಗುವುದಿಲ್ಲ. 60 ವರ್ಷಗಳಿಂದ ದೇಶದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯದಲ್ಲಿ ಸಂಘಟನೆ ತೊಡಗಿದೆ’ ಎಂದೂ ಹೇಳಿದರು.
‘ಅನೇಕ ದೇಶಗಳು ವೈವಿಧ್ಯದಿಂದ ಏಕತೆ ಎಂಬ ಘೋಷಣೆ ಕೂಗಿದರೆ, ಭಾರತದಲ್ಲಿ ಮಾತ್ರ ಏಕತೆಯಿಂದ ವಿವಿಧತೆ ಎಂದು ಹೇಳುತ್ತೇವೆ’ ಎಂದರು.