ನವದೆಹಲಿ: ಬಹುಕೋಟಿ ಮೇವು ಹಗರಣದ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ.
ಮೂರು ಪ್ರಕರಣಗಳಲ್ಲಿ ಜಾಮೀನು ರದ್ದುಪಡಿಸಿ ಜಾರ್ಖಂಡ್ ಹೈಕೋರ್ಟ್ ಜನವರಿ 10 ರಂದು ತೀರ್ಪು ನೀಡಿದೆ. ಇನ್ನು ಪ್ರಶ್ನಿಸಿ ಲಾಲು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ವಿವರಣೆ ನೀಡುವಂತೆ ಸಿಬಿಐಗೆಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ ಅವರನ್ನು ಒಳಗೊಂಡ ಪೀಠ ತಿಳಿಸಿದೆ.
1990 ರಲ್ಲಿ ಪಶುಸಂಗೋಪನೆ ಇಲಾಖೆಯ ಖಜಾನೆಯಿಂದ ಅಕ್ರಮವಾಗಿ ಹಣ ತೆಗೆದ ₹900 ಕೋಟಿ ಮೊತ್ತದ ಮೇವು ಹಗರಣ ಇದಾಗಿದೆ. ಈಗಿನ ಬಿಹಾರ ಮತ್ತು ಜಾರ್ಖಂಡ್ ಆಗ ಬಿಹಾರ ರಾಜ್ಯವಾಗಿತ್ತು. ಲಾಲು ಅವರು ಆಗ ಮುಖ್ಯಮಂತ್ರಿಯಾಗಿದ್ದರು.
ಯಾದವ್ ಅವರನ್ನು ಜಾರ್ಖಂಡ್ನ ರಾಂಚಿಯ ಬಿರ್ಸಾ ಮುಂಡಾ ಕೇಂದ್ರ ಕಾರಗೃಹದಲ್ಲಿ ಇರಿಸಲಾಗಿದೆ.
ಜಾರ್ಖಂಡ್ ಹೈಕೋರ್ಟ್ನಲ್ಲಿ ಲಾಲು ಅವರು ತಮಗೆ ವಯಸ್ಸಾಗಿರುವುದು ಮತ್ತು ಅನಾರೋಗ್ಯದ ಕಾರಣ ನೀಡಿ ಜಾಮೀನಿಗೆ ಮನವಿ ಸಲ್ಲಿಸಿದ್ದಾರೆ.
ಮಧುಮೇಹ, ರಕ್ತದೊತ್ತಡ ಹಾಗೂ ಇತರ ಹಲವು ಕಾರಣಗಳನ್ನು ನೀಡಿ 71 ವರ್ಷದ ಲಾಲು ಪ್ರಸಾದ್ ಅವರು ಮೇವು ಹಗರಣದ ಒಂದು ಪ್ರಕರಣದಲ್ಲಿ ಈಗಾಗಲೇ ಜಾಮೀನು ಪಡೆದುಕೊಂಡಿದ್ದಾರೆ. ಇನ್ನೂ ಹಲವು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.