ಜೋಹಾನ್ಸ್ಬರ್ಗ್: ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ದಕ್ಷಿಣ ಆಫ್ರಿಕಾದ 80 ವರ್ಷದ ಮೌಲ್ವಿ ಮೌಲಾನಾ ಯೂಸೂಫ್ ತೂತ್ಲಾ ಕೋವಿಡ್ನಿಂದಾಗಿ ಮೃತಪಟ್ಟಿದ್ದಾರೆ.
‘ಅವರು ಈಚೆಗಷ್ಟೇ ಭಾರತದಿಂದ ಮರಳಿದ್ದರು.ಇಸ್ಲಾಮಿಕ್ ಬರಿಯಲ್ ಕೌನ್ಸಿಲ್, ತೂತ್ಲಾ ಅವರ ಪಾರ್ಥಿವ ಶರೀರವನ್ನು ಒಂದು ಚೀಲದಲ್ಲಿ ತಲುಪಿಸಿದ ನಂತರ ಅಂತ್ಯಕ್ರಿಯೆ ನೆರವೇರಿಸಿದೆವು’ ಎಂದು ತೂತ್ಲಾ ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ.
ತಬ್ಲೀಗ್ ಜಮಾತ್ ವಿರುದ್ಧ ಟೀಕೆ: ಗುಂಡು ಹಾರಿಸಿ ವ್ಯಕ್ತಿಯ ಕೊಲೆ
ಲಖನೌ: ದೇಶದಲ್ಲಿ ಕೊರೊನಾ ವೈರಸ್ ಹರಡಲಾಗುತ್ತಿದೆ ಎಂದು ಆರೋಪಿಸಿ ತಬ್ಲೀಗ್ ಜಮಾತ್ ಅನ್ನು ಟೀಕಿಸಿದ್ದ ವ್ಯಕ್ತಿಯೊಬ್ಬರನ್ನು ಉತ್ತರ ಪ್ರದೇಶದ ಪ್ರಯಾಗ್ರಾಜ್ ಜಿಲ್ಲೆಯ ಮೋಧಾ ಗ್ರಾಮದಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಲೌತನ್ ನಿಷಾದ್ (30) ಹತ್ಯೆಗೀಡಾದ ವ್ಯಕ್ತಿ. ಕೊರೊನಾ ವಿಚಾರವಾಗಿ ಗ್ರಾಮದ ಇತರರೊಂದಿಗೆ ವಾಗ್ವಾದ ನಡೆಸಿದ್ದ ಲೌತನ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮೊಹಮ್ಮದ್ ಸೋನಾ ಎಂಬಾತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಮೃತ ವ್ಯಕ್ತಿಯ ಸಂಬಂಧಿಕರಿಗೆ ಉತ್ತರ ಪ್ರದೇಶ ಸರ್ಕಾರ ₹5 ಲಕ್ಷ ಪರಿಹಾರ ಘೋಷಿಸಿದೆ.